Thursday, 22 June 2017

ಅಮರ ಡಾಕ್ಟರ್ ಹೆಡಗೆವಾರ್



    ಡಾಕ್ಟರ್‌ಜಿಯವರ ಜೀವನವೇ ಕಷ್ಟ ಮತ್ತು ತ್ಯಾಗಗಳಿಗೆ ಇನ್ನೊಂದು ಹೆಸರು. ಬಾಲ್ಯದಿಂದಲೇ ದೇಶಭಕ್ತಿಯ ವ್ರತ ಸ್ವೀಕರಿಸಿದ್ದವರು ಅವರು. ಅತ್ಯಂತ ಶ್ರದ್ಧೆಯಿಂದ ಜೀವನವಿಡೀ ಅದನ್ನು ನಡೆಸಿಯೂ ನಡೆಸಿದರು. ಸ್ಫಟಿಕದಂತಹ ಶುದ್ಧ ಚಾರಿತ್ರ್ಯ ಅವರದು.

    ಆಕಾರದಲ್ಲಿ ಭವ್ಯ, ಆಜಾನುಬಾಹು. ಮುಖದಲ್ಲಿ ಸಿಡುಬಿನ ಕಲೆ. ಶ್ಯಾಮ ವರ್ಣ. ಕಣ್ಣುಗಳಲ್ಲಿ ತುಳುಕಿ ಚಿಮ್ಮುತ್ತಿದ್ದ ಅಲೌಕಿಕ ತೇಜಸ್ಸು, ದೊಡ್ಡದಾದ ಮೀಸೆ, ಆದರೂ ತುಂಬ ಶಾಂತ ಸ್ವಭಾವ, ಸೌಮ್ಯ ನಡವಳಿಕೆ, ಮಾತುಗಳೆಂದರೆ ಪ್ರೇಮದ ಹೊಳೆ.

    ಸದಾ ಪ್ರಸನ್ನಚಿತ್ತರು ಅವರು. ಹಗಲು ರಾತ್ರಿ ಬಿಡುವಿಲ್ಲದೆ ಕ್ರಿಯಾಶಾಲಿ. ಸಂಘಕಾರ್ಯದ ಕುರಿತಾಗಿಯೇ ಸದಾ ಆಲೋಚನೆ. ಕೈಯಲ್ಲಿ ಕಾಸಿಲ್ಲ. ಸಾಧನಗಳೂ ಇಲ್ಲ. ನಿತ್ಯ ನೂರಾರು ವಿಧ ಸಂಕಟ, ತೊಂದರೆಗಳು. ಇಷ್ಟಾದರೂ ಅವರ ಪ್ರಸನ್ನತೆಗೆ ಎಂದು ಭಂಗವಿರಲಿಲ್ಲ. ತಮ್ಮ ಸುತ್ತ ಇಂತಹ ಪ್ರಸನ್ನತೆಯ ಕಂಪು ಹರಡುತ್ತಿದ್ದರು. ಭಾಷಣ, ಮಾತುಕತೆಯ ಅವರ ಶೈಲಿ ಸಹ ತೀರ ಸರಳ, ಅಹಂಕಾರದ ಲವಲೇಶವೂ ಅದರಲ್ಲಿ ಇರುತ್ತಿರಲಿಲ್ಲ. ಕೋಪವನ್ನು ನಿಯಂತ್ರಿಸಿದ್ದರು. ಲೋಭ, ಮೋಹಗಳನ್ನು ಬಾಲ್ಯದಲ್ಲಿಯೇ ದೂರಗೊಳಿಸಿದ್ದರು. ಅವರ ಉಡುಪು ಸರಳ, ಜೀವನವೂ ಸರಳ.

    ಡಾಕ್ಟರ್ ಹೆಡಗೆವಾರ್ ಅವರು ನಿಧನರಾದರೆನ್ನುವುದೇನೋ ನಿಜ. ಆದರೆ ಒಮ್ಮೊಮ್ಮೆ ಯೋಚಿಸಿದಾಗ ಅದೂ ಅಸತ್ಯವೇನೋ ಎನ್ನಿಸುತ್ತದೆ. ಅವರು ಇನ್ನೂ ಜೀವಂತ ಇದ್ದಾರೆ ಎನ್ನುವುದೇ ಹೆಚ್ಚು ಸರಿ. ಕಾರಣ ಡಾಕ್ಟರ್‌ಜಿ ಹಾಗೂ ಸಂಘ ಇವೆರಡೂ ಅಭಿನ್ನ. ಸಂಘ ಇರುವಾಗ ಡಾಕ್ಟರ್‌ಜಿ ಇಲ್ಲವಾಗುವುದು ಹೇಗೆ ಸಾಧ್ಯ? ಪ್ರತಿಯೊಂದು ಸಂಘಸ್ಥಾನದಲ್ಲಿ ಪ್ರತಿಯೊಬ್ಬ ಸ್ವಯಂಸೇವಕನ ಹೃದಯಮಂದಿರದಲ್ಲಿ ಅವರು ವಿರಾಜಿತರು.

    ನಿತ್ಯ ಶಾಖೆಗೆ ಹೋಗಬೇಕು. ಅಲ್ಲಿನ ಕಾರ್ಯಕ್ರಮಗಳಲ್ಲಿ ಒಂದಾಗಿ ಪಾಲ್ಗೊಳ್ಳಬೇಕು. ಸಂಘ ಕಾರ್ಯವನ್ನು ತನುಮನಧನಗಳಿಂದ ಅತ್ಯಂತ ಶ್ರದ್ಧೆ ವಹಿಸಿ ಮಾಡಬೇಕು. ಹಾಗಾದಾಗ ನಮ್ಮ ಹೃದಯದೊಳಗೂ ಡಾಕ್ಟರ್‌ಜಿಯವರ ಶಾಶ್ವತ ಆವಾಸ ಆಗಿಯೇ ಆಗುವುದು.

No comments:

Post a Comment