Friday, 16 June 2017

ನಿಯಮ ಪಾಲನೆಯ ಆದರ್ಶ



    ಡಾಕ್ಟರ್‌ಜಿ ಒಮ್ಮೆ ಆಡೆಗಾಂವ್‌ಗೆ ಹೋಗಿದ್ದರು. ನಾಲ್ವರು ಸ್ವಯಂಸೇವಕ ಗೆಳೆಯರೂ ಜೊತೆಗಿದ್ದರು. ಅಡೆಗಾಂವ್‍ದ ಮಿತ್ರರೊಬ್ಬರ ಮಗನಿಗೆ ಅಂದು ಉಪನಯನ. ಊಟ ಉಪಚಾರ ಇತ್ಯಾದಿ ಮುಗಿಯುವಾಗ ತುಂಬ ಹೊತ್ತಾಯಿತು. ನಾಗಪುರ ತಲುಪಲು ಯಾವ ವಾಹನಗಳೂ ಇಲ್ಲ.

    ಮರುದಿನ ಭಾನುವಾರ. ಪ್ರತಿ ಭಾನುವಾರ ನಾಗಪುರದಲ್ಲಿ ಎಲ್ಲ ಸ್ವಯಂಸೇವಕರ ಸಾಂಘಿಕ್ ಸಮತಾ ಕಾರ್ಯಕ್ರಮ. ಪ್ರತಿಯೊಬ್ಬರೂ ತಪ್ಪದೇ ಇರಬೇಕು. ಆದರೆ ಅಡೆಗಾಂವ್‍ನಲ್ಲಿ ಇದ್ದ ಡಾಕ್ಟರ್‌ಜಿ ನಾಗಪುರ ತಲುಪಲು ಯಾವುದೇ ವಾಹನ ಇಲ್ಲ. ಡಾಕ್ಟರ್‌ಜಿ ಬೇರೆ ಯೋಚಿಸಲಿಲ್ಲ. ೩೧ ಮೈಲು ದೂರದ ನಾಗಪುರಕ್ಕೆ ನಡೆದೇ ಹೊರಟರು. ಗೆಳೆಯರು, ನೆಂಟರು ಯಾರ ಮಾತಿಗೂ ಮಣಿಯಲಿಲ್ಲ ಅವರು. ತಮ್ಮೊಡನೆ ಬಂದ ನಾಲ್ವರು ಸ್ವಯಂಸೇವಕರ ಜೊತೆಗೂಡಿ ನಡೆದೇ ಬಿಟ್ಟರು.

    ದೃಢ ನಿಶ್ಚಯಿಯಾಗಿರುವವನ ಪ್ರಯತ್ಯಕ್ಕೆ ಪರಮೇಶ್ವರ ಸಹಾಯ ನೀಡಿಯೇ ನೀಡುವನು. ಅವರು ಇನ್ನೂ ಏಳೆಂಟು ಮೈಲು ನಡೆದಿರಲಿಲ್ಲ. ದಾರಿಯಲ್ಲಿ ದಟ್ಟ ಕತ್ತಲು ಕವಿಯಿತು. ತುಂಬ ಹೊತ್ತು ನಡೆದ ಮೇಲೆ ನಾಗಪುರಕ್ಕೆ ಹೋಗುವ ಒಂದು ಮೋಟಾರ್ ಕಾಣಿಸಿತು. ಡ್ರೈವರ್ ಡಾಕ್ಟರ್‌ಜಿ ಪರಿಚಯಸ್ಥ. ಆತ ವಾಹನ ನಿಲ್ಲಿಸಿ ಕೇಳಿದ. "ಡಾಕ್ಟರ್‌ಜಿ, ಈ ರಾತ್ರಿಯಲ್ಲಿಲ್ ಹೀಗೆ ಕಾಲ್ನಡಿಗೆಯಲ್ಲಿ....?"

    ಡಾಕ್ಟರ್‌ಜಿ ನಕ್ಕು ನುಡಿದರು. "ಅಣ್ಣಾ, ನಾಗಪುರಕ್ಕೆ ಹೋಗುವುದು ಅವಶ್ಯವಿತ್ತು. ಬೇರೆ ಎನೂ ಇರಲಿಲ್ಲ. ಮತ್ತೇನು ಮಾಡೋಣ?"

    "ಬನ್ನಿ ಕುಳಿತುಕೊಳ್ಳಿ" ಡ್ರೈವರನೆಂದ. ಡಾಕ್ಟರ್‌ಜಿ ಅವನ ಪಕ್ಕ ಕುಳಿತರು. ಉಳಿದವರು ಹಿಂದೆ. ರಾತ್ರಿ ಒಂದು ಒಂದೂವರೆ ಸುಮಾರಿಗೆ ಅವರೆಲ್ಲ ನಾಗಪುರ ತಲುಪಿದರು. ಭಾನುವಾರ ಬೆಳಿಗ್ಗೆ ಸರಿಯಾದ ಸಮಯಕ್ಕೆ ಡಾಕ್ಟರ್‌ಜಿ ಸಂಘಸ್ಥಾನಕ್ಕೆ ಬಂದರು. ಸ್ವಯಂಸೇವಕರಿಗೆಲ್ಲಾ ಆಶ್ಚರ್ಯ. ಎಂಥ ಆದರ್ಶ್ ಮೇಲ್ಪಂಕ್ತಿ!

No comments:

Post a Comment