Thursday, 22 June 2017

ಉತ್ತರಾಧಿಕಾರಿ



     ಡಾಕ್ಟರ್‌ಜಿಯವರ ಕಾಯಿಲೆ ಮತ್ತಷ್ಟು ಉಲ್ಬಣಿಸಿತು. ಲಂಬರ್ ಪಂಕ್ಚರ್ ಚಿಕಿತ್ಸೆ ಮಾಡುವ ನಿರ್ಧಾರ ಕೈಗೊಂಡರು ವೈದ್ಯರು. ಇದು ಡಾಕ್ಟರ್‌ಜಿಯವರಿಗೆ ತಿಳಿಯಿತು. ಅವರು ಶ್ರೀ ಗುರೂಜಿ, ಮಾ|| ಬಾಬಾಜಿ ಪಾಧ್ಯೆ, ಬಾಳಾಸಾಹೆಬ ದೇವರಸ್, ಕೃಷ್ಣರಾವ್ ಮೊಹರೀಲ್ ಮೊದಲಾದ ಪ್ರಮುಖ ಕಾರ್ಯಕರ್ತರನ್ನು ಬಳಿ ಕರೆದರು.

    ಚಿಂತೆ ತುಂಬಿ ಮೌನ ಕವಿದ ವಾತಾವರಣ. ಎಲ್ಲರ ಕಣ್ಣುಗಳು ಡಾಕ್ಟರ್‌ಜಿಯವರ ಮೇಲೆ. ನಡು ನಡುವೆ ತಮ್ಮ ಮನದಲ್ಲಿ ಏಳುತ್ತಿದ್ದ ಭಾವನೆಗಳ ಆವೇಗವನ್ನು ಹತ್ತಿಕ್ಕುವ ವಿಫಲ ಪ್ರಯತ್ನ ಅವರೆಲ್ಲ ನಡೆಸಿದರು. ಡಾಕ್ಟರ್‌ಜಿಯವರೆ ಕೊನೆಯಲ್ಲಿ ಮೌನ ಮುರಿದರು. "ಈಗ ಲಂಬರ್ ಪಂಕ್ಚರ್ ಮಾಡುವರು. ಪ್ರಾಯಶಃ ಇದೇ ಕೊನೆಯ ಉಪಾಯ ಉಳಿದಿರಬಹುದು. ಯಶಸ್ವಿಯಾದಲ್ಲಿ ಸಂತೋಷ. ಆದರೆ ಆಗದೆ ಹೋದಲ್ಲಿ ಸಂಘ ಕಾರ್ಯದ ಪೂರ್ತಿ ಹೊಣೆ ನಿಮ್ಮ ಮೇಲೆಯೇ ಎಂದು ನೀವು ತಿಳಿಯಿರಿ" ಗುರೂಜಿಯವರಿಗೆ ಅವರು ತಿಳಿಸಿದರು.

    "ಡಾಕ್ಟರ್‌ಜಿ ಹಾಗೇಕೆ ಮಾತನಾಡುವಿರಿ? ಎಲ್ಲವೂ ಸರಿಯಾಗುವುದು" ಎಂದರು ಶ್ರೀ ಗುರೂಜಿ.

    ಡಾಕ್ಟರ್‌ಜಿ ಮುಗುಳ್ನಗುತ್ತಾ "ಮನುಷ್ಯನಾದವನು ಯಾವಾಗಲೂ ಒಳ್ಳೆಯ ಭರವಸೆ ಇಟ್ಟುಕೊಳ್ಳಬೇಕೆಂಬುದನ್ನು ನಾನೂ ಒಪ್ಪುವೆ. ಜೊತೆಗೆ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಿದ್ಧನಾಗಿಯೂ ಇರುವುದು ಅಗತ್ಯ. ಸದ್ಯ ನಾನು ಹೇಳಿದಷ್ಟು ಮಾಡಿ" ಎಂದರು.

    ಈಗ ಡಾಕ್ಟರ್‌ಜಿ ನಿಶ್ಚಿಂತರು. "ಇನ್ನು ಬೇಕಾದಲ್ಲಿ ಲಂಬರ್ ಪಂಕ್ಚರ್ ಮಾಡಿರಿ" ವೈದ್ಯರಿಗೆ ಅವರು ತಮ್ಮ ಅನುಮತಿ ತಿಳಿಸಿದರು.

    ವೈದ್ಯರು ತಮ್ಮ ತಮ್ಮಲ್ಲೇ ಮಾತನಾಡಿಕೊಂಡು, ಸಂಜೆ ಚಿಕಿತ್ಸೆ ಮಾಡಲು ನಿರ್ಧರಿಸಿದರು. ಆ ದಿನ ಡಾಕ್ಟರ್‌ಜಿಯವರಿಗೆ ಅಸಹನೀಯ ವೇದನೆ. ಮಾನಸಿಕವಾಗಿಯೂ ಅಪಾರ ನೋವಿನ ಅನುಭವ. ತಮ್ಮ ಜೀವಿತ ಕಾಲದಲ್ಲಿಯೇ ಸುಸಂಘಟಿತ ಸಮೃದ್ಧ ಹಿಂದು ರಾಷ್ಟ್ರವನ್ನು ಅವರು ಕಾಣಬಯಸಿದ್ದರು. ಆದರೆ ಆರೋಗ್ಯ ಕೆಟ್ಟು ಶರೀರವೇ ಕುಸಿಯುತ್ತಿದೆ. "ನನ್ನ ಪ್ರಿಯ ಸ್ವಯಂಸೇವಕ ಬಂಧುಗಳೇ, ನನ್ನ ಆರಾಧ್ಯ ದೇವತೆಗಳೇ, ಸಂಘ ಕಾರ್ಯ ಬೆಳೆಸಲು ಮುಂದೆ ನೀವೆಷ್ಟು ಕಷ್ಟಗಳನ್ನು ಅನುಭವಿಸಬೇಕಾಗುವುದೋ..." ಎಂಬೆಲ್ಲ ಯೋಚನೆ. ಆ ಚಿಂತೆಯೇ ಅವರ ಮನಸ್ಸನ್ನು ಕಾಡುತ್ತಿತ್ತು. ನೀರಿನಿಂದ ಹೊರತೆಗೆದ ಮೀನಿನಂತೆ ವಿಲವಿಲನೆ ಚಡಪಡಿಸುತ್ತಿದ್ದರು. ಅವರಿಗೆ ನಿದ್ರೆ ಬರುತ್ತಿರಲಿಲ್ಲ. ಆಗಾಗ್ಗೆ ಮಗ್ಗಲು ಬದಲಿಸುತ್ತಿದ್ದರು. ಒಮ್ಮೊಮ್ಮೆ ಏಳುವರು. ಪುನಃ ಕುಳಿತುಕೊಳ್ಳುವರು; ವಿಚಾರಮಗ್ಯರಾಗಿ ಅತ್ತಿಂದಿತ್ತ ಓಡಾಡುವರು. ಶ್ರೀ ಗುರೂಜಿಯವರಿಗೆ ಸಂಘ ಕಾರ್ಯದ ಹೊಣೆ ಒಪ್ಪಿಸಿದ ಮೇಲಷ್ಟೇ ಮನಸ್ಸು ತುಸು ಶಾಂತವಾಯಿತು.

    ಸಾಯಂಕಾಲ ಚಿಕಿತ್ಸೆ ನಡೆಯಿತು. ಬೆನ್ನು ಹುರಿಯಿಂದ ನೀರು ಧಾರಾಕಾರವಾಗಿ ಹರಿಯಿತು. ಅಷ್ಟಾದರು ನೋವು ಮಾತ್ರ ಕಡಿಮೆಯಾಗಲೇ ಇಲ್ಲ.

    ಮಧ್ಯರಾತ್ರಿಯ ನಂತರ ಅವರು ಪ್ರಜ್ಞಾಶೂನ್ಯರಾದರು. ಬೆಳಗಾಗುತ್ತಿದ್ದಂತೆಯೇ ಅವರ ಜ್ವರ ೧೦೬ ಡಿಗ್ರಿಗೆ ಏರಿತು. ನಾಗಪುರದ ಗಣ್ಯ ವೈದ್ಯರೆಲ್ಲಾ ಸೇರಿದರು. ಸಾಕಷ್ಟು ವಿಚಾರ ವಿನಿಮಯ ನಡೆಯಿತು. ತರ ತರದ ಚಿಕಿತ್ಸೆಗಳಾದವು. ಆದರೂ ಯಾರಿಗೂ ಏನೂ ಹೊಳೆಯದು.

    ಡಾಕ್ಟರ್‌ಜಿಯವರ ಆರೋಕ್ಯ ಹದಗೆಟ್ಟ ಸುದ್ದಿ ನಾಗಪುರದಲ್ಲೆಲ್ಲಾ ಹರಡಿತು. ಸಹಸ್ರಾರು ಸ್ವಯಂಸೇವಕರು ಸೇರಿದರು. ಎಲ್ಲರಿಗೂ ಆತಂಕ, ಉದ್ವೇಗ. ಮನದಲ್ಲಿ ಭಗವಂತನಿಗೆ ಮೊರೆ. ಆದರೆ ಕಲನೆದುರಲ್ಲಿ ಯಾರ ಇಚ್ಛೆಯೂ ನಡೆಯದು.

    ೧೯೪೦ ಜೂನ್ ೨೧ ಶುಕ್ರವಾರ ಬೆಳಿಗ್ಗೆ ೯.೨೭ಕ್ಕೆ ಡಾಕ್ಟರ್‌ಜಿ ಇಹ ಲೋಕದ ಯಾತ್ರೆ ಮುಗಿಸಿದರು. ಸಹಸ್ರಾರು ಸ್ವಯಂಸೇವಕರ ಜೀವನದ ಆದರ್ಶ ಚೇತನ ಕಣ್ಮರೆಯಾಯಿತು. ಸಹಸ್ರಾವಧಿ ಕಾರ್ಯಕರ್ತರ ಪ್ರೇರಣಾ ಸ್ಥಾನ ಇಲ್ಲವಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಲ್ಪಿ, ಆದ್ಯ ಸರಸಂಘಚಾಲಕ ಪರಮ ಪೂಜನೀಯ ಡಾಕ್ಟರ್ ಹೆಡಗೆವಾರ್‌ಜಿ ಕಾಲದೊಂದಿಗೆ ಲೀನವಾದರು.

No comments:

Post a Comment