Thursday, 22 June 2017

ನಾನು ಬಂಗಾಲಕ್ಕೆ ಬರಬೇಕೆಂದಿರುವೆ



    ೧೯೪೦ ಜೂನ್ ೧೯ರ ಸಾಯಂಕಾಲ. ಬಂಗಾಲದ ಓರ್ವ ವ್ಯಕ್ತಿ ಡಾಕ್ಟರ್‌ಜಿಯವರನ್ನು ಕಾಣಲು ಬಂದರು. ಮೊದಲು ಕ್ರಾಂತಿಕಾರಿಗಳಾಗಿದ್ದವರು ಅವರು. ಡಾಕ್ಟರ್‌ಜಿಯವರ ಆಪ್ತ ಮಿತ್ರ ಹಾಗೂ ಸಹಕಾರಿ. ಪರಸ್ಪರ ಕಾಣುತ್ತಲೇ ಅವರೀರ್ವರ ಕಣ್ಣುಗಳಲ್ಲಿ ಸಂತೋಷ ಮಿಂಚಿತು. ಪ್ರೀತಿಯಿಂದ ಆಲಂಗಿಸಿಕೊಂಡರು. ಡಾಕ್ಟರ್‌ಜಿ ಜೊತೆ ಅವರ ಮಾತುಕತೆ ಆರಂಭವಾಯಿತು. ಹಳೆಯ ನೆನಪುಗಳೆಲ್ಲ ಮತ್ತೆ ಹಸಿರಾದವು. "ನಾನು ವಾಸಿಯಾದ ಕೂಡಲೇ ಬಂಗಾಲಕ್ಕೆ ಬರುವೆ. ಹಳೆಯ ಗೆಳೆಯರನ್ನೆಲ್ಲ ಇನ್ನೊಮ್ಮೆ ಭೇಟಿ ಮಾಡುವೆ" ಡಾಕ್ಟರ್‌ಜಿಯವರೆಂದರು. ಮಾತು ಮುಂದುವರೆಸುತ್ತಾ "ನಮ್ಮ ದೇಶದ ಈಗಿನ ಸ್ಥಿತಿಯಲ್ಲಿ ಸಂಘ ಕಾರ್ಯ ಎಷ್ಟು ಮಹತ್ವದ್ದೆಂದು ಅವರಿಗೆ ತಿಳಿಸುವೆ. ಅವರೆಲ್ಲ ಕಾರ್ಯಕ್ಕಿಳಿದಲ್ಲಿ ನಮ್ಮ ದೇಶದ ಪರಿಸ್ಥಿತಿ ಶೀಘ್ರವೇ ಸುಧಾರಿಸಬಹುದು. ಚಿತ್ರವೇ ಬದಲಾಗಬಹುದು" ಎಂದರು.

    "ನಾಳೆ ನಾಗಪುರಕ್ಕೆ ಶ್ರೀ ಸುಭಾಷಚಂದ್ರ ಬೋಸರು ಬರುವವರಿದ್ದಾರೆ. ನಿಮ್ಮನ್ನು ಭೇಟಿ ಮಾಡುವ ಇಚ್ಛೆ ಅವರಿಗಿದೆ. ಅದನ್ನು ತಿಳಿಸಲೆಂದೇ ನಾನು ಬಂದಿರುವೆ. ಅವರು ತುಂಬ ಅಪೇಕ್ಷೆಪಟ್ಟಿದ್ದಾರೆ". ಬಂಗಾಲದಿಂದ ಬಂದ ವ್ಯಕ್ತಿ ನುಡಿದರು.

    ಅದರಂತೆ ಮರುದಿನ ಶ್ರೀ ಬೋಸರು ಶ್ರೀ ಘಟಾಟೆಯವರ ಮನೆಗೆ ಬಂದರು. ಆಗ ಡಾಕ್ಟರ್‌ಜಿ ಜ್ವರದಿಂದ ತೀರ ನಿತ್ರಾಣರಾಗಿದ್ದರು. ಕಣ್ಣುಗಳೂ ಮುಚ್ಚಿದ್ದವು. ಅರೆ ಎಚ್ಚರ ಅವರಿಗೆ. ಹಾಗಾಗಿ ಸುಭಾಷ್ ಚಂದ್ರರಿಗೆ ಅವರನ್ನು ಭೇಟಿ ಮಾಡಲು ಆಗಲಿಲ್ಲ. ಅವರಿಗೂ ಡಾಕ್ಟರ್‌ಜಿಯವರ ಸ್ಥಿತಿ ಅರ್ಥವಾಯಿತು. ಸ್ವಯಂಸೇವಕರು ಅವರನ್ನು ಎಬ್ಬಿಸಲು ಯೋಚಿಸಿದರು. ಆದರೆ ಸುಭಾಷ್‍ಚಂದ್ರರೇ ಅವರನ್ನು ತಡೆದರು. "ಬೇಡ ಈಗ ಎಬ್ಬಿಸಬೇಡಿ. ಸರಿಯಲ್ಲ ಅದು. ನಾನು ಪುನಃ ಬರುವೆ" ಎಂದರು. ಕೆಲವು ಕ್ಷಣ ಅಲ್ಲಿಯೇ ನಿಂತು, ಡಾಕ್ಟರ್‌ಜಿಯವರನ್ನು ಎವೆಯಿಕ್ಕದೇ ನೋಡಿದರು. ಕೊನೆಯಲ್ಲಿ ಮೌನವಾಗಿ ಪ್ರಣಾಮ ಸಲ್ಲಿಸಿ ಹೊರಬಂದರು.

No comments:

Post a Comment