ಆಚಾರ್ಯ ವಿನೋಬಾ ಭಾವೆಯವರ ತಾಯಿ ಸಹೃದಯಿ ಮತ್ರವಲ್ಲ ದಯಾಳುವೂ ಹೌದು. ಒಮ್ಮೆ ಅವರ ಪಕ್ಕದ ಮನೆಯಾಕೆ ಬೇರಾವುದೋ ಊರಿಗೆ ಹೋಗಬೇಕಾಗಿತ್ತು. ಆಕೆಗೊಬ್ಬ ಮಗನಿದ್ದ. ಆತ ವಿನೋಬಾ ಓರಗೆಯವನೇ. ಆದರೆ ಆತನನ್ನು ತನ್ನೊಡನೆ ಕರೆದೊಯ್ಯುವುದು ಆಕೆ ಕಷ್ಟವಾಗಿತ್ತು. ಎಲ್ಲಿ ಬಿಟ್ಟುಹೋಗುವುದೆಂಬ ಚಿಂತೆ ಕಾಡತೊಡಗಿತು. ಇದನ್ನು ತಿಳಿದ ವಿನೋಬಾನ ತಾಯಿ, ತಮ್ಮಲ್ಲೇ ಬಿಟ್ಟುಹೋಗಲು ಹೇಳಿದರು. ನೆರೆಮನೆಯಾಕೆ ಅವರ ಬಳಿ ಮಗುವನ್ನು ಬಿಟ್ಟು ನಿಶ್ಚಿಂತೆಯಿಂದೆ ಊರಿಗೆ ಹೋದಳು.
ಮಕ್ಕಳಿಬ್ಬರೂ ಆನಂದದಿಂದ ಆಡತೊಡಗಿದರು. ತಾಯಿಯ ವಾತ್ಸಲ್ಯದಲ್ಲಿ ಮಿಂದೆದ್ದ ಮಕ್ಕಳು ತಣಿದರು.
ಊಟದ ಸಮಯವಾದಾಗ ತಾಯಿ ಪ್ರೀತಿಯಿಂದ ಮಕ್ಕಳಿಬ್ಬರನ್ನೂ ಊಟಕ್ಕೆ ಕರೆದರು. ಊಟ ಬಡಿಸುವಾಗ ತನ್ನ ತಾಯಿ ತಾರತಮ್ಯ ಮಾಡುತ್ತಿರುವುದನ್ನು ಬಾಲಕ ವಿನೋಬಾ ಗಮನಿಸಿದ. ತನಗೆ ಒಣರೊಟ್ಟಿ ಮಾತ್ರ. ಆ ಮಗುವಿಗಾದರೋ ತುಪ್ಪ ಹಾಕಿದ ರೊಟ್ಟಿ! ಮಾತ್ರವಲ್ಲ ತನ್ನಮ್ಮನೇ ಆತನಿಗೆ ಕೈಯಾರೆ ತಿನ್ನಿಸುತ್ತಿರುವುದನ್ನು ಕಂಡು "ಹೀಗೇಕೆ ಮಾಡುತ್ತಿರುವೆಯಮ್ಮ?" ಎಂದು ಅಮ್ಮನನ್ನು ಕೇಳಿಯೇ ಬಿಟ್ಟ.
ಅಮ್ಮನಿಗೆ ಮಗನ ಮನಸ್ಸು ಅರ್ಥವಾಯಿತು. "ನೋಡು ಮಗೂ, ನಿಮ್ಮಿಬ್ಬರಿಗೂ ಆಗುವಷ್ಟು ತುಪ್ಪ ಮನೆಯಲ್ಲಿಲ್ಲ. ನೀನಂತು ನನ್ನ ಮಗ ತಾನೇ? ಆದರೆ ಇವನು ನೆರೆಮನೆಯವನು. ಅತಿಥಿಯೆಂದರೆ ದೇವರಿಗೆ ಸಮಾನ. ನಾವು ಕಷ್ಟಪಟ್ಟಾದರೂ ಅತಿಥಿಗಳಿಗೆ ಆನಂದ ನೀಡಬೇಕು" ಎಂದರು ಆ ತಾಯಿ.
ಹೀಗೆ ವಿನೋಬಾ ಬಾಲ್ಯದಿಂದಲೇ ತಾಯಿಯಿಂದ ಸತ್ಸಂಸ್ಕಾರ ಪಡೆದರು. ಆದ್ದರಿಂದಲೇ ಅವರು ಶ್ರೇಷ್ಠರೆನಿಸಿದರು.
No comments:
Post a Comment