Thursday, 22 June 2017

ಅವಮಾನವೂ ನೈವೇದ್ಯವೇ



   ಹತ್ತಿರದ ಒಂದು ಊರಿನಲ್ಲಿ ಒಬ್ಬ ಪ್ರಸಿದ್ಧ ವಕೀಲರಿದ್ದರು. ಡಾ|| ಮೂಂಜೆಯವರಿಗೆ ಅವರ ಪರಿಚಯವಿತ್ತು. ’ನಾನು ಅವರಿಗೆ ಫೋನ್ ಮಾಡಿರುತ್ತೇನೆ. ನಿನ್ನ ಬಳಿಯಲ್ಲಿ ಒಂದು ಚೀಟಿಯನ್ನೂ ಕೊಡುತ್ತೇನೆ. ಅವರ ಮನೆಯಲ್ಲೇ ಉಳಿದುಕೋ. ಅಲ್ಲಿ ಒಂದು ಶಾಖೆ ಶುರು ಮಾಡಬಹುದು’ ಎಂದು ಹೇಳಿ ಡಾಕ್ಟರ್‌ಜಿಯವರನ್ನು ಕಳಿಸಿದರು. ಡಾಕ್ಟರ್‌ಜಿಯವರು ರೈಲಿನಲ್ಲಿ ಅಲ್ಲಿಗೆ ಹೋದರು. ತಾವು ಆ ರೈಲಿನಲ್ಲಿ ಬರುವುದಾಗಿ ಮೊದಲೇ ತಿಳಿಸಿದ್ದರು. ಆದರೆ ಅವರನ್ನು ಕರೆದುಕೊಂಡು ಬರಲು ಯಾರು ರೈಲು ನಿಲ್ದಾಣಕ್ಕೆ ಬಂದಿರಲಿಲ್ಲ. ಡಾಕ್ಟರ್‌ಜಿಯವರು ನಡೆದೇ ಆ ವಕೀಲರ ಮನೆಗೆ ಹೋದರು.

    ಆ ವಕೀಲರದು ತುಂಬಾ ದೊಡ್ಡ ಮನೆ. ೮-೧೦ ಮೆಟ್ಟಿಲು ಹತ್ತಿ ಮನೆಯ ಒಳಗೆ ಹೋಗಬೇಕು. ವಿಶಾಲವಾದ ಅರಮನೆಯಂತಹ ಮನೆ. ಹೊರಗೆ ವಿಶಾಲವಾದ ಹೂತೋಟ. ಹತ್ತಾರು ಜನ ಆ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊರ ಗೇಟು ಮುಚ್ಚಿದೆ. ಒಬ್ಬ ಕಾವಲು ಕಾಯುತ್ತಿದ್ದಾನೆ. ಡಾಕ್ಟರ್‌ಜಿಯವರು ಒಂದು ಚೀಟಿಯಲ್ಲಿ ತಮ್ಮ ಪರಿಚಯವನ್ನು ಬರೆದು ಒಳಗೆ ಕಳುಹಿಸಿಕೊಟ್ಟರು. ಒಳಗೆ ಬರಲು ಸೂಚನೆ ಬಂದಿತು.

    ಒಳಗೆ ಬಂದಾಗ ಅ ವಕೀಲರು ಕಾಲ ಮೇಲೆ ಕಾಲು ಹಾಕಿಕೊಂಡು ತನ್ನ ಶ್ರೀಮಂತಿಕೆಯ ಅಹಂಕಾರವನ್ನು ತೋರಿಸುತ್ತಾ ಯಾವುದೋ ಪುಸ್ತಕವನ್ನು ಓದುತ್ತಾ ಕುಳಿತಿದ್ದರು. ಡಾಕ್ಟರ್‌ಜಿಯವರನ್ನು ನೋಡಿ ಕುಳಿತುಕೊಳ್ಳಲೂ ಹೇಳದೆ ಒದುತ್ತಲೇ ಇದ್ದರು. ಡಾಕ್ಟರ್‌ಜಿಯವರು ವೈದ್ಯರಾಗಿದ್ದವರು. ಸ್ವಾಭಿಮಾನಿಗಳಾಗಿದ್ದವರು. ಕುಳಿತುಕೊಳ್ಳಲು ಹೇಳದಿದ್ದರಿಂದ ನಿಂತೇ ಇದ್ದರು. ಸುಮಾರು ೮-೧೦ ನಿಮಿಷ ಆ ವಕೀಲರು ಡಾಕ್ಟರ್‌ಜಿಯವರ ಕಡೆ ನೋಡಲಿಲ್ಲ, ಮಾತನಾಡಿಸಲೂ ಇಲ್ಲ. ಒಮ್ಮೆ ಕಿರುನೋಟದಲ್ಲಿ ಡಾಕ್ಟರ್‌ಜಿಯವರ ಕಡೆ ನೋಡುವುದು, ಮತ್ತೆ ಓದುವ ಹಾಗೆ ಮಾಡುವುದು. ಹೀಗೆಯೇ ನಡೆದಿತ್ತು.

    ಡಾಕ್ಟರ್‌ಜಿಯವರಿಗೆ ಗೊತ್ತಾಯಿತು. ತಾವು ಬಂದಿರುವುದೂ ಗೊತ್ತಿದ್ದೂ, ನಿಂತಿರುವುದು ಅರಿವಿದ್ದೂ, ತಾನು ತುಂಬಾ ವ್ಯವಧಾನವಿಲ್ಲದವನು ಎಂದು ತೋರಿಸಲು ವಕೀಲರು ನಾಟಕವಾಡುತ್ತಿದ್ದಾರೆ ಎಂದು. ಆದರೆ ಡಾಕ್ಟರ್‌ಜಿಯವರಿಗೆ ಆ ವ್ಯಕ್ತಿಯನ್ನು ಗೆಲ್ಲಬೇಕಾಗಿತ್ತು. ಎಷ್ಟೇ ಆಗಲಿ ಸಂಘಟನ ಕುಶಲರು. ವಕೀಲರು ಓದುತ್ತಿದ್ದ ಪುಸ್ತಕವನ್ನು ನೋಡಿದರು. ಅದು ಹೋಮಿಯೋಪತಿ ಬಗೆಗಿನ ಪುಸ್ತಕವಾಗಿತ್ತು. ಡಾಕ್ಟರ್‌ಜಿಯವರು ಅಲೋಪತಿ ವೈದ್ಯರಾದರೂ, ಹೋಮಿಯೋಪತಿಯ ಬಗ್ಗೆ ತಿಳಿದಿದ್ದರು. ನಿಂತಲ್ಲೇ ಡಾಕ್ಟರ್‌ಜಿಯವರು ಹೋಮಿಯೋಪತಿಯ ಬಗ್ಗೆ ಮಾತನಾಡಲು ಶುರು ಮಾಡಿದರು.

    ’ಎಂಥ ಅದ್ಭುತ ವೈದ್ಯ ಪದ್ಧತಿ ಅದು! ನೋಡುವುದಕ್ಕೆ ಒಂದು ಸಣ್ಣ ಸಕ್ಕರೆ ಗುಳಿಗೆ ರೀತಿಯಲ್ಲಿ ಇರುತ್ತದೆ. ಎಂಥೆಂತಹ ಖಾಯಿಲೆಗಳನ್ನು ವಾಸಿ ಮಾಡಬಲ್ಲದು ಅದು!’ ಎಂದು ಹೇಳಿದರು. ಅದನ್ನು ಕೇಳಿ ವಕೀಲರು ಓದುವುದನ್ನು ನಿಲ್ಲಿಸಿ ಪುಸ್ತಕವನ್ನು ಮುಚ್ಚಿಟ್ಟು ಡಾಕ್ಟರ್‌ಜಿಯವರು ಹೇಳುತ್ತಿದ್ದನ್ನು ಕೇಳಲು ಶುರು ಮಾಡಿದರು. ಒಂದಾದ ನಂತರ ಸಂಭಾಷಣೆ ಪ್ರಾರಂಭವಾಯಿತು. ವಕೀಲರು ಇದ್ದಕ್ಕಿದ್ದಂತೆ ಗಮನಿಸಿದಂತೆ ’ಅರೆ, ನಿಂತೇ ಇದ್ದೀರಲ್ಲಾ. ಕುಳಿತುಕೊಳ್ಳಿ’ ಎಂದರು. ಕೆಲಸದವನನ್ನು ಕರೆದು ’ಅವರು ಬಂದು ಇಷ್ಟು ಹೊತ್ತಾಗಿದೆ. ಚಹ ಕೊಡಲು ಗೊತ್ತಾಗುವುದಿಲ್ಲವೇ? ಹೋಗು, ಚಹ ತಾ’ ಎಂದು ಕಳಿಸಿದರು.

    ಕೆಲಸದವನು ಚಹ ತರಲು, ಡಾಕ್ಟರ್‌ಜಿಯವರು ಮನಸ್ಸಿನಲ್ಲೇ ನಿಶ್ಚಯ ಮಾಡಿದರು ’ಇವರಿಗೆ ಅಹಂಕಾರ ಇದೆ. ಆದರೆ ಅವರಿಗೆ ಪ್ರಭಾವವೂ ಇದೆ. ಅದನ್ನು ಉಪಯೋಗಿಸಿಕೊಳ್ಳಬೇಕು. ಇವರನ್ನು ಬಿಡಬಾರದು’ ಎಂದು. ಡಾಕ್ಟರ್‌ಜಿ ಆ ಮನೆಯಲ್ಲಿ ತಮ್ಮ ಸಾಮಾನನ್ನು ಇಟ್ಟು ಹೊರಗೆ ಸಂಪರ್ಕಕ್ಕೆ ಹೋಗುತ್ತಿದ್ದರು. ರಾತ್ರಿ ಬಂದು ಉಳಿದುಕೊಳ್ಳುತ್ತಿದ್ದರು. ಅಲ್ಲಿ ಒಮ್ಮೆಯೂ ಊಟ, ತಿಂಡಿ ಮಾಡುತ್ತಿರಲಿಲ್ಲ.

    ೭-೮ ದಿನಗಳ ನಂತರ ಆ ವಕೀಲರ ಹತ್ತಿರ ಬಂದು ’ಇಲ್ಲಿ ಸಂಘದ ಶಾಖೆ ಪ್ರಾರಂಭ ಮಾಡಬೇಕಾಗಿದೆ. ಅದಕ್ಕಾಗಿ ನಿಮ್ಮ ಮನೆಯಲ್ಲಿ ಒಂದು ಬೈಠಕ್ ಕರೆಯಲು ಯೋಚಿಸಿದ್ದೇನೆ’ ಎಂದರು. ಅದಕ್ಕೆ ವಕೀಲರು ’ಇದೊಂದು ಸುಡುಗಾಡು ಊರು. ಇಲ್ಲಿ ನಾಲ್ಕು ಜನ ಎಂದೂ ಸೇರುವುದಿಲ್ಲ. ಸಂಘಟನೆಯೆಂದರೆ ಯಾರು ಬರುವುದಿಲ್ಲ’ ಎಂದರು. ಆಗ ಡಾಕ್ಟರ್‌ಜಿ ’ಇಲ್ಲಿ ನಿಮಗೆ ಒಳ್ಳೆ ಹೆಸರಿದೆ. ನಿಮ್ಮ ಹೆಸರು ಹೇಳಿದರೆ ಸಾಕಷ್ಟು ಜನ ಬರುತ್ತಾರೆ’ ಎಂದು ಹೊಗಳಿ ಒಪ್ಪಿಸಿದರು.

    ಸುಮಾರು ಒಂದು ನೂರುಕ್ಕೂ ಹೆಚ್ಚು ಜನ ಆ ಬೈಠಕ್‍ಗೆ ಬಂದರು. ಡಾಕ್ಟರ್‌ಜಿ ಎಲ್ಲರಿಗೂ ಸಂಘದ ಬಗ್ಗೆ, ಶಾಖೆಯ ಬಗ್ಗೆ ಹೇಳಿ ಆ ವಕೀಲರನ್ನೇ ಸಂಘಚಾಲಕರೆಂದು ಘೋಷಣೆ ಮಾಡಿದರು. ಓಡಾಡಿದ್ದು, ನೂರಾರು ಜನರನ್ನು ಪರಿಶ್ರಮ ವಹಿಸಿ ಸೇರಿಸಿದ್ದು ಡಾಕ್ಟರ್‌ಜಿಯವರಾದರೂ ವಕೀಲರ ಮನೆಯಲ್ಲಿ ಒಮ್ಮೆ ಊಟವನ್ನು ಮಾಡದಿದ್ದರೂ ಅವರನ್ನೇ ಸಂಘಚಾಲಕರನ್ನಾಗಿ ಘೋಷಣೆ ಮಾಡಿದ್ದರು.

No comments:

Post a Comment