ದೇವ ದಾನವರ ನಡುವೆ ಯಾವಾಗಲೂ ಯುದ್ಧವಾಗುತ್ತಲೇ ಇತ್ತು. ದೇವತೆಗಳಿಗೇ ಬಹುತೇಕ ಜಯವಾಗುತ್ತಿತ್ತು. ಆಗ ದಾನವಗುರು ಶುಕ್ರಾಚಾರ್ಯರು ತಪಸ್ಸು ಮಾಡು ಸಂಜೀವಿನಿ ವಿದ್ಯೆ ಸಂಪಾದಿಸಿದರು. ಇದರಿಂದ ಸತ್ತ ದಾನವರನ್ನು ಅವರು ಮತ್ತೆ ಬದುಕಿಸುತ್ತಿದ್ದರು.
ಇದಕ್ಕೆ ಏನಾದರೂ ಪರಿಹಾರ ಹುಡುಕಿರೆಂದು ದೇವಗುರು ಬೃಹಸ್ಪತಿಯವರಲ್ಲಿ ದೇವತೆಗಳು ಬೇಡಿಕೊಂಡರು. ಸಂಜೀವಿನೀ ವಿದ್ಯೆ ಕಲಿತುಕೊಂಡು ಬರುವಂತೆ ದೇವಗುರುಗಳು ತೇಜಸ್ವೀ ಯುವಕ ಕಚನನ್ನು ಶುಕ್ರರ ಬಳಿ ಕಳುಹಿಸಿದರು.
ಕಚ ಶುಕ್ರಾಚಾರ್ಯರ ಆಶ್ರಮ ತಲುಪಿದ. ಅವರ ಶಿಷ್ಯನಾದ. ವಿದ್ಯ ಕಲಿಯತೊಡಗಿದ. ಶುಕ್ರಾಚಾರ್ಯರ ಮಗಳು ದೇವಯಾನಿಯ ಮನಸ್ಸನ್ನೂ ಗೆದ್ದ.
ಸಂಜೀವಿನೀ ವಿದ್ಯ ಸಂಪದಿಸಲೆಂದೇ ಕಚನು ಶುಕ್ರಾಚಾರ್ಯರ ಬಳಿ ಬಂದುದು ದಾನವರಿಗೆ ತಿಳಿಯಿತು. ಅವನನ್ನು ಮುಗಿಸಿಬಿಡಲು ಹಲವು ತಂತ್ರ ಹೆಣೆದರು. ಪ್ರತಿ ಬಾರಿ ಕಚನನ್ನು ದಾನವರು ಕೊಂದಾಗಲೂ ದೇವಯಾನಿ ಅವನ್ನು ಬದುಕಿಸಿಕೊಡಲು ತಂದೆಗೆ ದಂಬಾಲು ಬೀಳುತ್ತಿದ್ದಳು. ಶುಕ್ರಾಚಾರ್ಯರ ಸಂಜೀವಿನಿ ಮಂತ್ರದಿಂದ ಕಚ ಬದುಕಿ ಬರುತ್ತಿದ್ದ.
ಈ ಬಾರಿ ದಾನವರು ಉಪಾಯದಿಂದ ಕಚನ್ನು ಕೊಂದು ಸುಟ್ಟುಬಿಟ್ಟರು. ಆ ಬೂದಿಯನ್ನು ಸೋಮರಸದಲ್ಲಿ ಸೇರಿಸಿ ಆಚಾರ್ಯ ಶುಕ್ರರಿಗೆ ಕುಡಿಸಿದರು. ಎಂದಿನಂತೆ ಕಚನ್ನು ಬದುಕಿಸಿಕೊಡಿರೆಂದು ದೇವಯಾನಿ ಬೇಡಿದಳು. ಕಚ ತನ್ನ ಹೊಟ್ಟೆಯಲ್ಲಿರುವುದನ್ನು ತಿಳಿದ ಆಚಾರ್ಯರು ಅವನಿಗೆ ಸಂಜೀವಿನಿಯನ್ನು ಉಪದೇಶಿಸಿ ಅದೇ ಮಂತ್ರದಿಂದ ಜೀವ ನೀಡಿದರು. ಕಚ ಶುಕ್ರಾಚಾರ್ಯರ ಹೊಟ್ಟೆ ಸೀಳಿ ಹೊರಬಂದ. ತಾನು ಪಡೆದಿದ್ದ ಸಂಜೀವಿನಿ ಮಂತ್ರಬಲದಿಂದ ಆಚಾರ್ಯರನ್ನೂ ಬದುಕಿಸಿದ.
ಸಂಜೀವಿನಿ ವಿದ್ಯೆ ಕಲಿತು ತನ್ನ ಕರ್ತವ್ಯ ಪೂರೈಸಿದ್ದ ಕಚ ಗುರುವಿಗೆ ವಂದಿಸಿ ದೇವಲೋಕಕ್ಕೆ ಹೊರಟು ನಿಂತ. ಆಗ ತನ್ನನ್ನು ಮದುವೆ ಆಗೆಂದು ದೇವಯಾನಿ ಕಚನಲ್ಲಿ ಹಟ ಹಿಡಿದಳು. ’ಗುರುಪುತ್ರಿಯಾದ ನೀನು ನನಗೆ ಸೋದರಿ ಸಮಾನ. ಆದ್ದರಿಂದ ಈ ವಿವಾಹ ಸಾಧ್ಯವಿಲ್ಲ’ ಎಂದುಬಿಟ್ಟ ಕಚ. ಸಿಟ್ಟಾದ ದೇವಯಾನಿ ’ಶುಕ್ರಾಚಾರ್ಯರಿಂದ ನೀನು ಕಲಿತ ಯಾವ ವಿದ್ಯೆಯೂ ನಿನ್ನ ಉಪಯೋಗಕ್ಕೆ ಬಾರದಿರಲಿ’ ಎಂದು ಶಾಪ ಕೊಟ್ಟಳು. ಅವಳ ಶಾಪವನ್ನು ಸಂತೋಷದಿಂದ ಸ್ವೀಕರಿಸಿ ’ನನಗೆ ಉಪಯೋಗಕ್ಕೆ ಬಾರದಿದ್ದರೇನಂತೆ, ನಾನು ಈ ವಿದ್ಯೆಯನ್ನು ಬೇರೆಯವರಿಗೆ ಕಲಿಸುತ್ತೇನೆ’ ಎಂದು ನುಡಿದು ಆತ ದೇವಲೋಕಕ್ಕೆ ನಡೆದುಬಿಟ್ಟ.
ಕಚನಿಗೆ ಸಂತ ಸುಖಕ್ಕಿಂತ ದೇವಲೋಕದ ಹಿತವೇ ಮಿಗಿಲೆನಿಸಿತ್ತು. ಸಂಜೀವಿನಿ ವಿದ್ಯೆಯನ್ನು ಆತ ಇತರ ದೇವತೆಗಳಿಗೆ ಕಲಿಸಿದ. ಸಂಜೀವಿನಿ ವಿದ್ಯೆಯ ಬಲದಿಂದ ದೇವತೆಗಳು ದಾನವರ ಭಯದಿಂದ ಪಾರಾದರು.
No comments:
Post a Comment