Thursday, 22 June 2017

ಏಕಾಗ್ರತೆಯ ಅಭ್ಯಾಸ



   ಅಮೇರಿಕಾದ ಕೀಲ್‍ನಗರ. ಸ್ವಾಮಿ ವಿವೇಕಾನಂದರು ಅಲ್ಲಿನ ಪ್ರಾಧ್ಯಾಪಕ ಡೈಸನ್ ಜತೆ ಮಾತನಾಡುತ್ತಿದ್ದ ಸಂದರ್ಭ. ಸ್ವಾಮೀಜಿ ಕಾವ್ಯವನ್ನು ಓದುತ್ತಿದ್ದರು. ಆಗ ನಡುವೆ ಡೈಸನ್ ಕೇಳಿದ ಪ್ರಶ್ನೆಯೊಂದಕ್ಕೆ ಸ್ವಾಮೀಜಿ ಉತ್ತರಿಸಲಿಲ್ಲ. ಆದ್ದರಿಂದ ಆ ಪ್ರಾಧ್ಯಾಪಕ ಸಿಟ್ಟಾದ. ಅದನ್ನರಿತ ಸ್ವಾಮೀಜಿ, ’ಕ್ಷಮಿಸಿ, ಕಾವ್ಯ ಓದುವುದರಲ್ಲಿ ಮಗ್ನನಾಗಿದ್ದೆ. ನಿಮ್ಮ ಪ್ರಶ್ನೆಯನ್ನು ಗ್ರಹಿಸಲಾಗಲಿಲ್ಲ’ ಎಂದರು.

    ಡೈಸನ್‍ಗೆ ಉತ್ತರದಿಂದ ತೃಪ್ತಿಯಾಗಲಿಲ್ಲ. ಅದನ್ನು ಗಮನಿಸಿದ ಸ್ವಾಮೀಜಿ ತಾವು ಓದಿದ ಕಾವ್ಯಭಾಗವನ್ನು ಹಾಗೆಯೇ ಹೇಳಿದರು. ಆ ಕಾವ್ಯಭಾಗ ಅವರಿಗೆ ಕಂಠಪಾಠವಾಗಿದ್ದನ್ನು ಡೈಸನ್ ಗಮನಿಸಿದ. "ಪರಕೀಯ ಭಾಷೆಯ ಕಾವ್ಯವು ಒಂದೇ ಓದಿನಲ್ಲಿ ಕಂಠಪಾಠವಾಗುವುದು ಹೇಗೆ ಸಾಧ್ಯ?" ಎಂಬುದು ಆ ಪ್ರಾಧ್ಯಾಪಕನ ಪ್ರಶ್ನೆ. ಅತನಿಗಿದು ಅಚ್ಚರಿ!

    "ಇದರಲ್ಲಿ ಅಚ್ಚರಿಯೇನು ಬಂತು? ಏಕಾಗ್ರತೆಯಿಂದ ಓದಿದ್ದನ್ನು ನೆನಪಿಟ್ಟುಕೊಳ್ಳುವುದು ಸುಲಭ. ಯೋಗಸಾಧನೆ ಏಕಾಗ್ರತೆಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆಮೇಲೆ ಒಂದೇ ಕ್ಷಣದಲ್ಲಿ ಒಂದು ಶಬ್ದವನ್ನು ಓದತೊಡಗುತ್ತದೆ. ನೀವು ಒಂದು ಕ್ಷಣದಲ್ಲಿ ಒಂದು ಸಾಲನ್ನೇ ಓದಬಲ್ಲಿರಿ. ಏಕಾಗ್ರತೆಯ ಅಭ್ಯಾಸದಿಂದ ನಾನು ಒಂದೇ ನೋಟದಲ್ಲಿ ಇಡೀ ಒಂದು ಪುಟವನ್ನೇ ಓದಬಲ್ಲೆ. ಅಧ್ಯಯನದ ವೇಳೆ ನಾನು ಮೈಮರೆಯುತ್ತೇನೆ. ಮೈಮೇಲೆ ಬೆಂಕಿಕಿಡಿಯಿಟ್ಟರೂ ಆಗ ನನಗೆ ತಿಳಿಯುವುದಿಲ್ಲ". ಸ್ವಾಮೀಜಿಯವರ ಮಾತು ಮಾರ್ಮಿಕವಾಗಿತ್ತು.

No comments:

Post a Comment