Thursday, 22 June 2017

ಬಂಧುತ್ವದ ಬೆಸುಗೆ



    ಸಂಘ ಶಾಖೆಗೆ ಬರುವಂತಹವರು ತಮ್ಮೊಳಗಿನ ಭೇದಗಳನ್ನು ಮರೆಯುತ್ತಾರೆ. ಅವರಲ್ಲಿ ಬಂಧುಭಾವನೆ ತಾನಾಗಿ ಬೆಳೆಯುತ್ತದೆ. ಅನೇಕರಿಗೆ ಇದು ಆಶ್ಚರ್ಯಕರ ಎನಿಸುವಂತಹುದು. ಡಾಕ್ಟರ್‌ಜಿಯವರ ಬಳಿ ಕೆಲವರು ಪ್ರಶ್ನೆ ಸಹ ಮಾಡುತ್ತಿದ್ದರು. "ಇದರಲ್ಲೇನೂ ಜಾದೂ ಇಲ್ಲ. ಅದೊಂದು ದೊಡ್ಡ ರಹಸ್ಯವೂ ಇಲ್ಲ. ಅತ್ಯಂತ ನೇರ ಸರಳ ಸಂಗತಿ ಇದು. ಸಾಧಿಸಬೇಕಾದ ಧ್ಯೇಯದ ಮೇಲೆ ಗಮನ ಕೇಂದ್ರೀಕರಿಸಿ. ಕೆಟ್ಟದಾಗಿರುವುದನ್ನು ನೆನಪಿಸಲೂ ಸಹ ಬೇಡಿ. ಆಗ ಮನಸ್ಸುಗಳು ತಾವಾಗಿ ಒಂದುಗೂಡುತ್ತವೆ. ಜನರು ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಾಗ ಅವರ ಧ್ಯೇಯ ಕೇವಲ ಪುಸ್ತಕ ಅಥವಾ ಭಾಷಣಗಳಲ್ಲಿ ಮಾತ್ರ ಉಳಿಯುತ್ತದೆ" ಡಾಕ್ಟರ್‌ಜಿಯವರು ತಿಳಿಯಾಗಿ ವಿವರಿಸುತ್ತಿದ್ದ ರೀತಿ ಇದು.

    ೧೯೩೪ರ ಡಿಸೆಂಬರ್. ವರ್ಧಾದಲ್ಲಿ ಜಮುನಾಲಾಲಜಿ ಬಜಾಜರ ತೋಟದ ಸಮೀಪದಲ್ಲಿ ಸಂಘದ ಶಿಬಿರ. ಆ ದಿನಗಳಲ್ಲಿ ಮಹಾತ್ಮಾ ಗಾಂಧಿಯವರು ಅಲ್ಲೇ ವಾಸವಿರುತ್ತಿದ್ದರು. ಶಿಬಿರದ ವ್ಯವಸ್ಥೆ, ಅನುಶಾಸನ, ಸ್ವಯಂಸೇವಕರ ಪರಿಶ್ರಮಶೀಲತೆ, ಸ್ವಂತ ಖರ್ಚಿನಲ್ಲಿ ಗಣವೇಶ ಸಹಿತ ಶಿಬಿರಕ್ಕೆ ಬಂದಿರುವುದು ಇತ್ಯಾದಿ ಸುದ್ದಿ ಅವರಿಗೆ ತಿಳಿಯಿತು. ಅವರೂ ತುಂಬ ಉತ್ಸುಕತೆಯಿಂದ ಬೆಳಿಗ್ಗೆ ೬ ಘಂಟೆಗೆ ಶಿಬಿರದ ಸಂದರ್ಶನಕ್ಕೆ ಬಂದರು. ಎಲ್ಲೆಡೆ ಸ್ವತಃ ಓಡಾಡಿ ಶಿಬಿರದ ವ್ಯವಸ್ಥೆಗಳನ್ನು ನೋಡಿದರು.

    ಸ್ವಯಂಸೇವಕರ ವ್ಯಾಯಾಮ ಯೋಗ ಕಾರ್ಯಕ್ರಮವನ್ನು ಅವರು ಕಂಡರು. ನೂರಾರು ಸ್ವಯಂಸೇವಕರು ಒಟ್ಟಿಗೆ, ಉತ್ಸಾಹ ಹಾಗೂ ಅನುಶಾಸನದಿಂದ ಕೂಡಿ ಮಾಡಿದ ವ್ಯಾಯಾಮ ಕಂಡು ಅವರು ತುಂಬ ಪ್ರಭಾವಿತರಾದರು. ಸ್ವಯಂಸೇವರೊಡನೆ ಅವರ ಪ್ರಶ್ನೋತ್ತರ ಸಹ ನಡೆಯಿತು.

    "ಈ ಗಣವೇಶವನ್ನು ನಿನಗ್ಯಾರು ಕೊಟ್ಟರು?" ಮಹಾತ್ಮಾಜಿ ಸ್ವಯಂಸೇವಕನೊಬ್ಬನನ್ನು ಪ್ರಶ್ನಿಸಿದರು.

    "ಇದು ನನ್ನದೇ. ನಾನೇ ನನಗಾಗಿ ಹೊಲಿಸಿಕೊಂಡೆ" ಆತ ಉತ್ತರಿಸಿದ.

    "ಅದನ್ನು ಹೊಲಿಸಲು ಹಣ ಕೊಟ್ಟವರು ಯಾರು?" ಮತ್ತೆ ಬಂದಿತು ಪ್ರಶ್ನೆ.

    "ನಮ್ಮ ತಂದೆ-ತಾಯಿಗಳು. ಬರೀ ಗಣವೇಶದ್ದೇನು? ಇಲ್ಲಿ ಊಟ ವಸತಿಯ ಸಲುವಾಗಿ ತಗಲುವ ಖರ್ಚನ್ನೂ ಪ್ರತಿ ಸ್ವಯಂಸೇವಕ ತಾನೇ ಕೊಡುವನು. ದೂರ ದೂರದ ಹಳ್ಳಿಗಳಿಂದ ತಮ್ಮ ಸ್ವಂತ ಖರ್ಚಿನಲ್ಲಿಯೇ ಅವರು ಇಲ್ಲಿಗೆ ಬಂದಿದ್ದಾರೆ. ಸಂಘದ ನಿಯಮವೇ ಹಾಗೆ" ನೇರವಾಗಿ ಉತ್ತರ ಬಂತು.

    "ಪ್ರಯಾಣ, ಗಣವೇಶ, ಊಟ ಇದಕ್ಕೆಲ್ಲ ಸಂತ ಹಣ ಖರ್ಚು ಮಾಡಿ ಬಂದು ಇಲ್ಲಿ ಸೇರುವುದರಿಂದ ನಿಮಗಾಗುವ ಲಾಭವೇನು? ಅಂತಹ ಯಾವ ಆಕರ್ಷಣೆ ಇಲ್ಲಿದೆ?" ಮಾಹಾತ್ಮಾಜಿ ಪುನಃ ಪ್ರಶ್ನೆ ಮುಂದುವರಿಸಿದರು.

    "ಇದಕ್ಕಾಗಿ ನಿಶ್ಚಿತವಾಗಿ ಉತ್ತರ ಹೇಳಲು ನಾವು ಅಸಮರ್ಥರು. ಆದರೂ ದಿನನಿತ್ಯ ಒಟ್ಟಿಗೆ ಏಳುವುದು, ಕುಳಿತುಕೊಳ್ಳುವುದು, ಆಟ, ಊಟ, ನಿದ್ದೆ ಇತ್ಯಾದಿ ಎಲ್ಲದರಲ್ಲೂ ನಾವು ಒಂದು. ಮಾತ್ರವಲ್ಲ ಇವೆಲ್ಲವೂ ನಮ್ಮ ದೇಶಕ್ಕಾಗಿ ನಾವು ಮಾಡುತ್ತಿದ್ದೇವೆ ಎಂಬ ಭಾವನೆ ನಮ್ಮಲ್ಲಿದೆ. ಇದೇ ನಮಗೆ ಬಹಳ ಸಂತೋಷ ಕೊಡುತ್ತದೆ" - ಸ್ವಯಂಸೇವಕನೊಬ್ಬ ಉತ್ತರಿಸಿದ.

    ಮತ್ತ ಪ್ರಶ್ನೆ ’ನೀನು ಯಾರು? ಯಾವ ಜಾತಿ?’

    ’ನಾನು ಒಬ್ಬ ವಿದ್ಯಾರ್ಥಿ. ಹಿಂದು’ ಆತ ಉತ್ತರಿಸಿದ.

    ’ನೀನು ಯಾರು?’ ಮತ್ತೊಬ್ಬನಿಗೆ ಪ್ರಶ್ನೆ.

    ’ನಾನು ಒಬ್ಬ ವ್ಯಾಪಾರಿ. ಹಿಂದು’.

    ’ನೀನು’ ಮಗದೊಬ್ಬನಿಗೆ ಪ್ರಶ್ನೆ.

    ’ನಾನು ಹೊಲದಲ್ಲಿ ಕೂಲಿ ಮಾಡುವವನು. ಹಿಂದು’ ಆತ ಉತ್ತರಿಸಿದ. ಗಾಂಧೀಜಿ ಎಲ್ಲರನ್ನೂ ಕೇಳುತ್ತಾ ಹೊರಟರು. ಚಮ್ಮಾರ, ಕಮ್ಮಾರ, ಕ್ಷತ್ರಿಯ, ಸೊನೆಗಾರ ಹೀಗೆ ಹತ್ತು ಹಲವು ಕಸುಬು, ಜಾತಿಯವರು ಅಲ್ಲಿದ್ದರು. ಮಹಾತ್ಮಾಜಿ ಪ್ರಶ್ನಿಸಿದರು. "ನೀವು ಅಸ್ಪೃಶ್ಯರೊಡನೆ ಇರುವುದಲ್ಲದೇ ಊಟ ಸಹ ಮಾಡುವಿರಾ?"

    ಸಂಘದಲ್ಲಿ ಆ ಭೇದಭಾವವೇ ಇಲ್ಲ. ನಮಗೆ ಇನ್ನೊಬ್ಬನ ಜಾತಿ ಸಹ ಗೊತ್ತಿರುವುದಿಲ್ಲ. ನಮಗದು ಬೇಕಾಗಿಯೂ ಇಲ್ಲ. ನಾವೆಲ್ಲ ಹಿಂದುಗಳು. ಭಾರತ ಮಾತೆಯ ಮಕ್ಕಳು. ನಾವು ಪರಸ್ಪರ ಸಹೋದರರು. ಸಂಘ ನಮಗೆ ಈ ಶಿಕ್ಷಣ ಕೊಟ್ಟಿದೆ. ಆದ್ದರಿಂದ ಮೇಲು ಕೀಳು ಎಂಬ ಭೇದ ನಮ್ಮ ಮನದಲ್ಲಿ ಎಂದೂ ಏಳದು" ಸ್ವಯಂಸೇವಕರ ಬಿಚ್ಚುನುಡಿ ಸ್ಪಷ್ಟವಾಗಿತ್ತು.

    ಉತ್ತರ ಕೇಳಿ ಮಹಾತ್ಮಾಜಿ ತುಂಬ ಸಂತಸಗೊಂಡರು. ಈ ಶಿಬಿರ ನೋಡಿ ಡಾಕ್ಟರ್‌ಜಿ ಅವರನ್ನು ಭೇಟಿ ಮಾಡಿ ಅವರು ಪ್ರಸನ್ನರಾದುದಷ್ಟೇ ಅಲ್ಲ. ಪ್ರಭಾವಿತರೂ ಆದರು.

    ಈ ರೀತಿ ಎಲ್ಲೆಡೆ ತನ್ನ ಕಾರ್ಯಕ್ರಮಗಳಿಂದ ಸಂಘ ಎಲ್ಲರಿಗೂ ಪ್ರಿಯವಾಗತೊಡಗಿತು. ಹಿಂದು ಸಮಾಜದಲ್ಲಿ ಬಂಧುಭಾವನೆ ಬೇರೂರಲಾರಂಭಿಸಿತು.

No comments:

Post a Comment