Thursday, 22 June 2017

ನಮ್ಮ ಡಾಕ್ಟರ್‌ಜಿ



    ಡಾಕ್ಟರ್‌ಜಿಯವರದು ಸಂಘಕಾರ್ಯಕ್ಕಾಗಿ ನಿತ್ಯ ಪ್ರವಾಸ. ಕಾಲ್ನಡಿಗೆ, ಸೈಕಲ್, ಬಸ್ಸು, ರೈಲು ಹೀಗೆ ಹಲವು ವಿಧದಲ್ಲಿ ಸಾವಿರಾರು ಮೈಲುಗಳ ನಿರಂತರ ಪ್ರವಾಸ. ಹೊಸ ಹೊಸ ಗ್ರಾಮಗಳಿಗೆ ಹೋಗುವರು. ಯುವಕರನ್ನೆಲ್ಲ ಒಂದು ಕಡೆ ಸೇರಿಸುವರು. ಸಂಘದ ವಿಚಾರ ತಿಳಿಸಿ, ಪ್ರತಿಜ್ಞೆ ಕೊಟ್ಟು ಸ್ವಯಂಸೇವಕರನ್ನಾಗಿಸುವರು. ಪ್ರತ್ಯಕ್ಷ ಶಾಖೆಯ ಕೆಲಸದಲ್ಲಿ ಅವರನ್ನು ತೊಡಗಿಸುವರು. ಈ ರೀತಿ ಕಾರ್ಯಚಕ್ರ ಹಗಲೂರಾತ್ರಿ ಉರುಳುತ್ತಿತ್ತು.

    ಪಂಜಾಬಿಗೆ ಹೋದಾಗ ಅವರಿಗೆ ಅಲ್ಲಿ ಅದ್ದೂರಿಯ ಸ್ವಾಗತ. ’ಇಂದು ನಮ್ಮ ಶಾಖೆಗೆ ಡಾಕ್ಟರ್‌ಜಿ ಬಂದಿದ್ದಾರೆ. ನೀವೂ ಖಂಡಿತ ಶಾಖೆಗೆ ಬನ್ನಿ’ ಎಂದು ಒಬ್ಬರನ್ನೊಬ್ಬರು ಕರೆಯುತ್ತಿರುವುದು ಕಾಣುತ್ತಿತ್ತು. ಲಾಹೋರ್, ಅಮೃತಸರ, ಲೂಧಿಯಾನಗಳಲ್ಲಿ ಡಾಕ್ಟರ್‌ಜಿಯವರನ್ನು ನೋಡಲು ನೂರಾರು ಸ್ವಯಂಸೇವಕರು ಬಂದರು. ಡಾಕ್ಟರ್‌ಜಿ ಅವರೊಂದಿಗೆ ಮಾತನಾಡುತ್ತಾ, "ನೂರಾರು ಮೈಲು ದೂರದಿಂದ ನಿಮ್ಮನ್ನು ನೋಡಲು ಬಂದಿರುವೆ. ನೀವೂ ಸಹ ನನ್ನನ್ನು ನೋಡಲು ಉತ್ಸುಕತೆಯಿಂದಲೇ ಬಂದಿದ್ದೀರಿ. ಕಾರಣ ನಾವೆಲ್ಲ ದೂರ ದೂರ ಇದ್ದರೂ ಪ್ರತ್ಯಕ್ಷದಲ್ಲಿ ಸೋದರರೇ ಆಗಿದ್ದೇವೆ. ನಮ್ಮ ಮನಸ್ಸುಗಳು ಹತ್ತಿರವಿದೆ. ನಾವು ಒಂದೇ ತಾಯಿಯ ಮಕ್ಕಳು. ಇದನ್ನು ನೆನಪು ಮಾಡುವ ಕೆಲಸವನ್ನೇ ಸಂಘ ಮಾಡುತ್ತಿದೆ. ಇಡೀ ಸಮಾಜದಲ್ಲಿ ಸೋದರ ಭಾವವನ್ನು ರೂಪಿಸಲು ಸಂಘವು ಪ್ರಯತ್ನಿಸುತ್ತಿದೆ. ಸಂಘ ಕಾರ್ಯವೇನೋ ಸರಳವೇ. ಆದರೆ ಅದು ಪ್ರತ್ಯಕ್ಷ ವ್ಯವಹಾರದಲ್ಲಿ ಕಾಣುವುದು ಅಗತ್ಯವಿದೆ. ಈ ಮಹತ್ವಪೂರ್ಣ ಕಾರ್ಯವನ್ನು ಪೂರ್ತಿ ಗಮನವಹಿಸಿ ನಾವು ಮಾಡಬೇಕು" ಎಂದರು. ಆವರೆಗೆ ಪಂಜಾಬಿನ ಸ್ವಯಂಸೇವಕರು ದೊಡ್ಡ ದೊಡ್ಡ ಭಾಷಣಗಳನ್ನು ಬಿಗಿಯುವ ಭಾರೀ ಗರ್ಜಿಸುವ ತುಂಬ ರೋಷದಿಂದ ಎಗರಾಡುವ ಅನೇಕ ಮಂದಿಯನ್ನು ನೋಡಿದ್ದರು. ಆದರೆ ಶಾಂತ ರೀತಿಯಿಂದ ಕೆಲವೇ ತೂಕದ ಸರಳ ನೇರ ಶಬ್ದಗಳಲ್ಲಿ ಮಾತನಾಡುವ, ಕೇಳುಗರ ಹೃದಯಗಳಲ್ಲಿ ಅಚ್ಚಳಿಯದ ಪರಿಣಾಮ ಬೀರುವ ಭಾಷಣಕಾರರನ್ನು ಅವರು ನೋಡಿರುವುದು ಇದೇ ಮೊದಲ ಬಾರಿ. ಆ ಮಾತುಗಳು ಕೇವಲ ಶಬ್ದಗಳಷೇ ಆಗಿರಲಿಲ್ಲ. ಅವುಗಳಲ್ಲಿ ಡಾಕ್ಟರ್‌ಜಿಯವರ ನಡವಳಿಕೆಯ ಮೆರಗು ಸಹ ಇತ್ತು. ಇದರಿಂದಾಗಿ ಪಂಜಾಬದಲ್ಲಿ ಸಂಘ ಕಾರ್ಯ ಚೆನ್ನಾಗಿಯೇ ಬೆಳೆಯಿತು.

    ಡಾಕ್ಟರ್‌ಜಿ ಬಂಗಾಲ ತಲಪಿದರು. ಅಲ್ಲಿ ಸಂಘಕಾರ್ಯ ಇನ್ನೂ ಹೊಸದು. ಆದರೆ ಅಲ್ಲಿಯೂ ಅದೇ ಆತ್ಮೀಯತೆ. ಡಾಕ್ಟರ್‌ಜಿ ಅಲ್ಲಿಯವರೊಡನೆ ಬಂಗಾಲಿಯಲ್ಲೇ ಮಾತನಾಡತೊಡಗಿದಾಗ ಅವರೆಲ್ಲರಿಗೂ ಆಶ್ಚರ್ಯ. ಕಲ್ಕತ್ತೆಯ ಅನೇಕ ಗಣ್ಯರನ್ನು ಡಾಕ್ಟರ್‌ಜಿ ಭೇಟಿ ಮಾಡಿದರು. ಸಂಘದ ನೇರ ಹಾಗೂ ಸರಳ ಕಾರ್ಯವಿಧಾನ ನೋಡಿದ ಅವರಲ್ಲನೇಕರು "ಇದೆಂಥಾ ದೇಶ ಕಾರ್ಯ? ಬಾಂಬು ಮಾಡುವುದಿಲ್ಲ. ಪಿಸ್ತೂಲು ಉಪಯೋಗಿಸುವುದಿಲ್ಲ. ಭಾಷಣ ಇಲ್ಲ. ಪತ್ರಿಕೆ ಇಲ್ಲ. ಆಂಗ್ಲರನ್ನು ಬೈಯ್ಯುವುದೂ ಇಲ್ಲ. ಇದೆಂತಹ ದೇಶಭಕ್ತಿಯ ಕಾರ್ಯ?" ಎಂದು ಕೇಳಿದರು.

    ಡಾಕ್ಟರ್‌ಜಿ ಅವರಿಗೆ ಸಂಘದ ವಿಶೇಷತೆಯನ್ನು ವಿವರಿಸಿದರು. "ಬಂಧುಗಳೇ, ಸ್ವರಾಜ್ಯ ಪಡೆಯುವುದೇನೋ ಸುಲಭ. ಆದರೆ ಅದನ್ನು ಉಳಿಸಿಕೊಂಡು ಸ್ವರಾಜ್ಯವನ್ನು ರೂಪಿಸುವುದು ಹೆಚ್ಚಿನ ಮಹತ್ವವುಳ್ಳದ್ದು. ಈ ಪ್ರಪಂಚದಲ್ಲಿ ಯೋಗ್ಯತೆ ಗಳಿಸಿದಲ್ಲಿ ಉನ್ನತ ಸ್ಥಾನ ತನ್ನಿಂತನೇ ಬರುತ್ತದೆ. ನಿಸರ್ಗದ ನಿಯಮ ಅದು. ನಮ್ಮಲ್ಲಿ ದುರ್ಗುಣಗಳು ನುಸುಳಿ ನಾವು ಅಯೋಗ್ಯರಾದೆವು. ಅದಕ್ಕಾಗಿ ಬೇರೆಯವರ ದಾಸರಾದೆವು. ನಮ್ಮ ದುರ್ಗುಣಗಳನ್ನೆಲ್ಲ ಬಿಟ್ಟು ನಾವು ಸದ್ಗುಣಿಗಳಾದರೆ ನಮ್ಮೆಲ್ಲ ಸಮಸ್ಯೆಗಳೂ ಕೊನೆಗೊಳ್ಳುವುವು. ಸ್ವರಾಜ್ಯ ಸಹ ಸಿಕ್ಕುವುದು, ನಮ್ಮ ಗತವೈಭವವು ತಾನಾಗಿ ಮರಳುವುದು. ನಾವು ಎಲ್ಲಾ ದೃಷ್ಟಿಯಿಂದಲೂ ಯೋಗ್ಯರಾಗಬೇಕೆಂದು ಸಂಘವು ಶಿಕ್ಷಣ ನೀಡುತ್ತಿದೆ. ಇದಕ್ಕಾಗಿಯೇ ಸಂಘದ ಶಾಖೆಗಳು. ಇಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯುತ್ತಿವೆ. ಸಂಘದ ಧ್ಯೇಯವೇ ಇದು. ಆದ್ದರಿಂದ ಬೇರೆ ಎಲ್ಲ ಕೆಲಸಗಳನ್ನು ಗೌಣವೆಂದು ಭಾವಿಸಿ ಸಂಘ ಕಾರ್ಯಕ್ಕೆ ನಮ್ಮ ಜೀವನದಲ್ಲಿ ಮೊದಲ ಸ್ಥಾನ ಕೊಡಬೇಕಾಗಿದೆ".

    ಡಾಕ್ಟರ್‌ಜಿ ಒಮ್ಮೆ ಪೂನಾಕ್ಕೆ ಹೋಗಿದ್ದರು. ಅಲ್ಲಿ ಸಂಘಚಾಲಕರೊಡನೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ಅವರ ಮುಂದೆ ಇಬ್ಬರು ಬಾಲಕರು ಬರುತ್ತಿದ್ದರು. ಡಾಕ್ಟರ್‌ಜಿಯವರನ್ನು ನೋಡಿ ಆ ಹುಡುಗರು ಮುಗುಳ್ನಕ್ಕರು. ಡಾಕ್ಟರ್‌ಜಿ ಸಹ ಮುಗುಳ್ನಕ್ಕರು. ಆಗ ಸಂಘಚಾಲಕರು ’ಇವರ್ಯಾರು? ನಿಮಗೆ ಇವರು ಹೇಗೆ ಗುರುತು?’ ಎಂದು ಕೇಳಿದರು. "ಇವರು ನಮ್ಮ ಸ್ವಯಂಸೇವಕರು" ಡಾಕ್ಟರ್‌ಜಿ ಉತ್ತರಿಸಿದರು.

    ಸಂಘಚಾಲಕರು ಪುನಃ ಕೇಳಿದರು - "ಇವರೇನೂ ಗಣವೇಶ ಹಾಕಿಲ್ಲ. ಬೇರಾವುದೇ ಬಾಹ್ಯಚಿಹ್ನೆ ಇವರಲ್ಲಿ ಕಾಣಿಸದು. ಆದರೂ ಹೇಗೆ ತಿಳಿಯಿತು?"

    "ಮನಸ್ಸಿನ ಗುರುತು ಎಲ್ಲಕ್ಕಿಂತ ದೊಡ್ಡದು. ಮನಸ್ಸನ್ನು ಸಂಸ್ಕರಿಸುವುದು, ಅವುಗಳನ್ನು ಒಂದುಗೂಡಿಸುವುದು ಇದೇ ಸಂಘದ ಕೆಲಸ. ಮನಸ್ಸಿನಿಂದಲೇ ಮನುಷ್ಯ ಒಳ್ಳೆಯನಾಗುವನು" ಎಂದು ಡಾಕ್ಟರ್‌ಜಿ ಉತ್ತರಿಸಿದರು.

    ಪ್ರತಿಯೊಂದು ಶಾಖೆಯ ಎಲ್ಲಾ ಸ್ವಯಂಸೇವಕರಿಗೂ ಡಾಕ್ಟರ್‌ಜಿಯವರು ತಮ್ಮವರೇ ಎನಿಸುತ್ತಿತ್ತು. ಡಾಕ್ಟರ್‌ಜಿ ಅವರು ಸಹ ಸ್ವಯಂಸೇವಕರನ್ನು ನೋಡುತ್ತಿದ್ದುದು ಅದೇ ರೀತಿ.

No comments:

Post a Comment