Thursday, 22 June 2017

ಕುಶಪಥಕ



    ಮೊದ ಮೊದಲು ಸಂಘ ಶಾಖೆಗೆ ಬರುತ್ತಿದ್ದವರು ಕೇವಲ ತರುಣರು ಮಾತ್ರ. ಕ್ರಮೇಣ ಅವರ ತಮ್ಮಂದಿರೂ ಬರತೊಡಗಿದರು. ಕಿಶೋರ ಸ್ವಯಂಸೇವಕರ ಒಂದು ಗಣವೇ ತಯಾರಾಯಿತು. ಡಾಕ್ಟರ್‌ಜಿ ಅದಕ್ಕೆ ’ಕುಶಪಥಕ’ ಎಂದು ಹೆಸರಿಟ್ಟರು.

    ಲವ, ಕುಶರು ಶ್ರೀರಾಮನ ಮಕ್ಕಳು. ತಮ್ಮ ತಾಯಿ ಸೀತೆಯೊಂದಿಗೆ ಅವರಿಬ್ಬರೂ ದಟ್ಟ ಕಾಡಿನಲ್ಲಿದ್ದರು. ರಾಜನ ಮಕ್ಕಳಾದರೂ ಪರ್ಣಕುಟೀರದಲ್ಲಿ ವಾಸ, ಒಣ ರೊಟ್ಟಿ ಆಹಾರ. ತುಂಬ ಶ್ರದ್ಧೆಯಿಂದ ವಾಲ್ಮೀಕಿ ಮುನಿಗಳ ಬಳಿ ವಿವಿಧ ವಿದ್ಯೆಗಳನ್ನು ಕಲಿತರು. ಚಕ್ರವರ್ತಿ ಶ್ರೀರಾಮಚಂದ್ರನ ಪತ್ನಿಯಾದರೂ ವನದಲ್ಲಿ ವಾಸ ಮಾಡುತ್ತಾ ಅನೇಕ ವಿಧ ಕಷ್ಟ ಸಹಿಸುತ್ತಿದ್ದವಳು ಸೀತೆ. ಶಾಖೆಗೆ ಬರುತ್ತಿದ್ದ ಆ ಕಿಶೋರರ ಮನದಲ್ಲೂ ಇದೇ ಭಾವನೆಯನ್ನು ಪ್ರತಿಬಿಂಬಿಸುವ ಸಲುವಾಗಿ ಡಾಕ್ಟರ್‌ಜಿ ಅವರ ಗುಂಪಿಗೆ ’ಕುಶಪಥಕ’ ಎಂದು ಹೆಸರಿಟ್ಟರು. ನಮ್ಮ ಗತ ಇತಿಹಾಸ ವೈಭವಪೂರ್ಣವಾದುದು. ಆದರೆ ಭಾರತಮಾತೆ ಮಾತ್ರ ಪರತಂತ್ರಳು. ಆಕೆ ದುಃಖಿನಿ. ನಾವು ಆಕೆಯ ಮಕ್ಕಳು. ಸರ್ವಸ್ವವನ್ನೂ ಪಣಕ್ಕಿಟ್ಟು ಆಕೆಯ ದುಃಖವನ್ನು ದೂರಗೊಳಿಸುವುದು ನಮ್ಮ ಪರಮ ಕರ್ತವ್ಯ. ಈ ನಿಲುವು ಕುಶಪಥಕದ ಎಲ್ಲ ಸ್ವಯಂಸೇವಕರದಾಯಿತು.

    ಅದೇ ಕಿಶೋರರು ಬೆಳೆದು ದೊಡ್ಡವರಾದರು. ಶಾಲೆ ಕಾಲೇಜುಗಳಲ್ಲಿ ನಿರ್ಭೀತರಾಗಿ ಆತ್ಮವಿಶ್ವಾಸದಿಂದ ಕಾರ್ಯ ಮಾಡತೊಡಗಿದರು. ಅವರಲ್ಲಿ ಅನೇಕರು ಬೇರೆ ಪ್ರಾಂತಗಳಿಗೆ ಪ್ರಚಾರಕರಾಗಿ ಸಹ ಹೊರಟರು. ಇವರನ್ನು ಕಂಡು ಉನ್ನತ ಶಿಕ್ಷಣ ಪಡೆದ ಇತರ ತರುಣರೂ ತಮ್ಮ ಮನೆ ಮಠಗಳನ್ನು ತೊರೆದು ಸಂಘ ಕಾರ್ಯದ ವಿಸ್ತಾರಕ್ಕಾಗಿ ಹೊರಟರು. ತಾವು ತಲುಪಿದಲ್ಲೆಲ್ಲ ಉತ್ತಮ ಶಾಖೆಗಳನ್ನು ಆರಂಭಿಸಿ ಕ್ರಮೇಣ ಅಲ್ಲಿನವರೇ ಆದರು. ಅಲ್ಲಿನ ಭಾಷೆ, ಅಲ್ಲಿನ ವ್ಯವಹಾರದ ರೀತಿ ನೀತಿ ಇತ್ಯಾದಿ ತಮ್ಮದಾಗಿಸಿಕೊಂಡು ಅಲ್ಲಿನ ಜನರ ವಿಶ್ವಾಸ ಗಳಿಸಿದರು. ಈ ದೇಶವೇ ನನ್ನದು, ಇಲ್ಲಿನ ಜನ, ಭಾಷೆಗಳು, ಹಳ್ಳಿಗಳು ಎಲ್ಲವೂ ನನ್ನವೇ ಎಂಬ ಭಾವನೆ ಅವರಲ್ಲಿ ದೃಢಗೊಂಡಿತು.

    ಬ್ರಾಹ್ಮಣ-ಅಬ್ರಾಹ್ಮಣ, ಬಡವ-ಬಲ್ಲಿದ, ಓದಿದ-ಓದದ ಯಾರೇ ಆಗಲಿ, ಯಾವುದೇ ಪಂಥ, ಸಂಪ್ರದಾಯ ಆಗಿರಲಿ, ನಾವೆಲ್ಲರೂ ಒಂದೇ. ಒಬ್ಬಳೇ ತಾಯಿಯ ಮಕ್ಕಳ ನಾವು ಎಂಬ ಸಂಘದ ವಿಚಾರ ಎಲ್ಲೆಡೆ ಬೇರೂರತೊಡಗಿತು. ಪ್ರತ್ಯಕ್ಷ ಆಚರಣೆಯಲ್ಲಿಯೂ ಅದು ಕಾಣಲಾರಂಭಿಸಿತು.

    ಹಿಂದೊಮ್ಮೆ ಭಗೀರಥ ಪಾಪನಾಶಿನಿ ಗಂಗೆಯನ್ನು ಭೂಮಿಗೆ ಕರೆತಂದಿದ್ದು. ಅಂತೆಯೇ ಹೀನ ಭಾವನೆಯನ್ನು ನಾಶಗೊಳಿಸುವ ಸಂಘ ಗಂಗೆಯನ್ನು ಡಾಕ್ಟರ್‌ಜಿ ದೇಶದ ತುಂಬಾ ಹರಿಸಿ ಆಧುನಿಕ ಕಾಲದ ಭಗೀರಥರಾದರು.

    ಮುಂದೆ ಸರಸಂಘಚಾಲಕರಾದ ಬಾಳಾಸಾಹೇಬ ದೇವರಸರು ಸಹ ಇದೇ ಕುಶಪಥಕದ ಸ್ವಯಂಸೇವಕರು. ಶಿಕ್ಷಕರೂ ಆಗಿದ್ದವರು. ಈ ಪಥಕ ಅನೇಕ ಹಿರಿಯ ಕಾರ್ಯಕರ್ತರನ್ನು ಸಂಘಕ್ಕೆ ನೀಡಿದೆ.

No comments:

Post a Comment