೧೯೪೮ರ ಗಾಂಧೀಜಿ ಹತ್ಯೆಯ ನಂತರ ಸಂಘದ ಮೇಲೆ ನಿರ್ಬಂಧ ಹಾಕಲಾಯಿತು. ದೇಶಾದಾದ್ಯಂತ ಸ್ವಯಂಸೇವಕರ ಮೇಲೆ ಹಲ್ಲೆ ನಡೆಯಿತು. ಸ್ವಯಂಸೇವಕರ ಆಸ್ತಿಪಾಸ್ತಿಯನ್ನು ನಷ್ಟಗೊಳಿಸಲಾಯಿತು. ಅನೇಕರು ವಿಧವಿಧವಾದ ಕಷ್ಟಕ್ಕೊಳಪಟ್ಟರು.
ಆ ಸಮಯದಲ್ಲಿ ಕೊಲ್ಹಾಪುರದ ಸಂಘಚಾಲಕರಾಗಿದ್ದವರು ಮಾ. ಪೆಂಡಾರ್ಕರ್ಜಿ. ಒಂದು ಸಿನಿಮಾ ಸ್ಟುಡಿಯೋದ ಮಾಲಿಕರು. ಡಾಕ್ಟರ್ಜಿಯವರ ಏಕೈಕ ಚಲನಚಿತ್ರವನ್ನು ಚಿತ್ರೀಕರಿಸಿದವರು ಅವರೇ.
ಗಾಂಧೀಜಿ ಹತ್ಯೆಯ ಕೋಪಕ್ಕೆ ಪೆಂಡಾರ್ಕರ್ರವರ ಸ್ಟುಡಿಯೋ ಬಲಿಯಾಯಿತು. ಸುದ್ದಿ ತಿಳಿದು ಪೆಂಡಾರ್ಕರ್ ಮತ್ತು ಅವರ ಹೆಂಡತಿ ಸ್ಟುಡಿಯೋಗೆ ಬಂದು ನೋಡಿದರೆ ದುರುಳರು ಅದಕ್ಕೆ ಬೆಂಕಿ ಹಚ್ಚಿ ಬೂದಿಗೊಳಿಸಿದ್ದರು. ಆ ದೃಶ್ಯವನ್ನು ನೋಡಿದ ಪೆಂಡಾರ್ಕರ್ರವರ ಹೆಂಡತಿ ಅಳತೊಡಗಿದರು. ಆದರೆ ಪೆಂಡಾರ್ಕರ್ರವರು ಮಾತ್ರ ಸುಮ್ಮನೆ ಉರಿಯುತ್ತಿದ್ದ ಸ್ಟುಡಿಯೋ ಕಡೆ ನೋಡುತ್ತಾ ನಿಂತಿದ್ದರು.
ಅವರ ಹೆಂಡತಿಯು "ನಿಮಗೇನೂ ಅನ್ನಿಸುತ್ತಲೇ ಇಲ್ಲವೇನು? ನಮ್ಮ ಸ್ಟುಡಿಯೋವನ್ನು ಸುಟ್ಟು ಹಾಕಿದ್ದರೂ ನಿಮಗೆ ದುಃಖ, ಕೋಪ ಬರುತ್ತಿಲ್ಲವೇ?" ಎಂದು ಕೇಳಿದರು.
ಪೆಂಡಾರ್ಕರ್ರವರು ಶಾಂತವಾಗಿ "ಹೋಗಲಿ ಬಿಡು, ಸ್ಟುಡಿಯೋ ಸುಟ್ಟು ಆರಿದ ನಂತರ ಇದ್ದಲಿನ ಅಂಗಡಿಯನ್ನು ತೆರೆದರಾಯಿತು" ಎಂದರು.
No comments:
Post a Comment