Thursday, 22 June 2017

ನಿಜವಾದ ಸಂತೋಷ



   ದಿಲ್ಲಿಯ ರಣರಣ ಬಿಸಿಲು. ಆ ದಿನ ದಿಲ್ಲಿ ಬಂದ್ ಬೇರೆ. ತಾಯಿಯೊಬ್ಬಳು ಮನೆಗೆ ಹೋಗಲು ರಿಕ್ಷಾ ಹಿಡಿಯುವುದು ಅನಿವಾರ್ಯವಾಗಿತ್ತು. ಐದೇ ರೂಪಾಯಿ ಕೈಯಲ್ಲಿದ್ದದ್ದು. ಒಂದು ಸೈಕಲ್ ರಿಕ್ಷಾವನ್ನು ಬಾಡಿಗೆಗೆ ಗೊತ್ತು ಮಾಡಿದರು. ಬಡಪಾಯಿ ಸೈಕಲ್ ರಿಕ್ಷಾವಾಲ ಕಷ್ಟಪಟ್ಟು ತುಳಿಯುತ್ತಿದ್ದ. ಒಮ್ಮೆಲೇ ರಿಕ್ಷಾ ನಿಲ್ಲಿಸಿ "ಅಮ್ಮಾ ನಾನೀಗಲೇ ಬಂದೆ" ಎಂದು ಇಳಿದು ಹೋದ.

    ಸ್ವಲ್ಪ ಹೊತ್ತಾಯಿತು. ಆತ ಬರಲಿಲ್ಲ. "ಎಲ್ಲಿ ಹೋದನೋ ಗೊತ್ತಿಲ್ಲ. ಬರುವಾಗ ಗೂಂಡಾಗಳನ್ನು ಕರೆದುಕೊಂಡು ಬಂದರೆ...? ಈ ರಿಕ್ಷಾವಾಲಾಗಳನ್ನು ನಂಬುವುದು ಹೇಗೆ..?" ಹೀಗೆ ಆ ತಾಯಿ ಗಾಬರಿಗೊಂಡು ಯೋಚಿಸತ್ತಿರುವಾಗಲೇ ಆತ ಬಂದ. ಆತನ ಮುಖದಲ್ಲಿ ತೃಪ್ತಿಯ ಮಂದಹಾಸವಿತ್ತು.  ಬಂದವನೇ "ಅಮ್ಮ ಧನ್ಯವಾದ" ಎಂದ. "ನನಗೇಕೆ ಧನ್ಯವಾದ?" ಎಂದು ಆಕೆ ಆಶ್ಚರ್ಯದಿಂದ ಕೇಳಿದಳು.

    "ಅಮ್ಮಾ ನೀವು ನನಗೆ ಐದು ರೂಪಾಯಿ ಕೊಟ್ಟಿರಿ. ಪಕ್ಕದ ಗುಡಿಗೆ ಹೋಗಿ ಎರಡು ರೂಪಾಯಿ ಹುಂಡಿಗೆ ಹಾಕಿ ನನ್ನ ಕುಟುಂಬಕ್ಕೆ ಒಳಿತಾಗಲೆಂದು, ಇನ್ನೊಂದು ರೂಪಾಯಿ ಹುಂಡಿ ಹಾಕಿ ನಿಮಗೆ ಒಳಿತಾಗಲೆಂದು ಪ್ರಾರ್ಥಿಸಿದೆ. ಏಕೆ ಗೊತ್ತೆ? ಬೆಳಗ್ಗಿನಿಂದ ಏನೂ ತಿಂದಿರಲಿಲ್ಲ. ಕೈಯಲ್ಲಿ ಕಾಸಿರಲಿಲ್ಲ. ನೀವು ನನ್ನ ಪಾಲಿನ ದೇವರಂತೆ ಬಂದು ಐದು ರೂಪಾಯಿ ಕೊಟ್ಟಿರಿ. ಈಗ ಉಳಿದ ಹಣದಲ್ಲಿ ಚಹ ಬಿಸ್ಕತ್ತಿನಿಂದ ನನ್ನ ಹಸಿವು ಹಿಂಗಿಸಿಕೊಳ್ಳುವೆ. ನಿಮ್ಮಂತಹವರನ್ನು ದೇವರು ಬದುಕಿನುದ್ದಕ್ಕೂ ಚೆನ್ನಾಗಿಟ್ಟರೆ ನಮ್ಮಂತಹವರ ಮುಖದಲ್ಲಿ ಮಂದಹಾಸ ಮಿನುಗುವಂತೆ ಮಾಡಬಲ್ಲಿರಿ".

    ಆತನ ಮಾತು ಕೇಳಿ ಆ ತಾಯಿಗೆ ಹೃದಯ ತುಂಬಿಬಂತು.

No comments:

Post a Comment