Thursday, 22 June 2017

ಡಾಕ್ಟರ್‌ಜಿಯವರ ಸಮಾಧಾನ

ಜನಸಂಘದ ಸಂಸ್ಥಾಪಕರೂ ಹಾಗೂ ಅದರ ಮೊದಲ ಅಧ್ಯಕ್ಷರೂ ಆಗಿದ್ದ ಶ್ಯಾಮಪ್ರಸಾದ ಮುಖರ್ಜಿಯವರಿಗೆ ಒಮ್ಮೆ ಯಾವುದೋ ಒಂದು ವಿಷಯದ ಬಗ್ಗೆ ಗೊಂದಲವಾಯಿತು. ಸಮಸ್ಯೆಯ ಪರಿಹಾರ ಕಂಡುಕೊಳ್ಳಲು ಡಾಕ್ಟರ್‌ಜಿಯವರ ಬಳಿ ಹೋಗಿ ಮಾತನಾಡಲು ನಿಶ್ಚಿಯಿಸಿದರು. ಆ ಸಮಯದಲ್ಲಿ ಡಾಕ್ಟರ್‌ಜಿಯವರ ಆರೋಗ್ಯ ಅಷ್ಟೇನೂ ಚೆನ್ನಾಗಿರಲಿಲ್ಲ.

    ಆ ಸಮಯದಲ್ಲಿ ಶ್ರೀ ಗುರೂಜಿಯವರು ಡಾಕ್ಟರ್‌ಜಿಯವರ ಶುಶ್ರೂಷೆಗೆ ಸ್ವತಃ ತಾವೇ ನಿಂತಿದ್ದರು. ಮುಖರ್ಜಿಯವರು ಡಾಕ್ಟರ್‌ಜಿಯವರನ್ನು ಭೇಟಿ ಮಾಡುವ ಸಲುವಾಗಿ ಬಂದಾಗ ಶ್ರೀ ಗುರೂಜಿಯವರಿಗೆ ಕೊಂಚ ಕಸಿವಿಸಿಯಾಯಿತು. ಮೊದಲೇ ಡಾಕ್ಟರ್‌ಜಿಯವರ ಆರೋಗ್ಯ ಸರಿಯಾಗಿಲ್ಲ, ಇನ್ನು ಸಮಾಲೋಚನೆಗೆ ಹೇಗೆ ಅವಕಾಶ ಕೊಡುವುದು? ಇದು ಗುರೂಜಿಯವರಿಗಿದ್ದ ಸಮಸ್ಯೆ.

    ಡಾಕ್ಟರ್‌ಜಿಯವರ ಜೊತೆ ಚರ್ಚಿಸಬೇಕಾದ ವಿಷಯವನ್ನು ಮುಖರ್ಜಿಯವರಲ್ಲಿ ಕೇಳಿದರು. ಆ ಸಮಸ್ಯೆಯನ್ನು ಕೇಳಿ ಶ್ರೀ ಗುರೂಜಿಯವರಿಗೆ ತಾನೇ ಅದಕ್ಕೆ ಉತ್ತರ ಕೊಡಬಲ್ಲೆನೆಂಬ ಅಭಿಪ್ರಾಯ ಉಂಟಾಯಿತು. ಕೆಲವು ಗಂಟೆಗಳ ಮಾತುಕತೆ ನಡೆಯಿತು. ಆದರೂ ಗುರೂಜಿಯವರು ಹೇಳಿದ ಯಾವ ಪರಿಹಾರವೂ ಮುಖರ್ಜಿಯವರಿಗೆ ಸಮಾಧಾನಕರವಾಗಿ ತೋರಲಿಲ್ಲ. ಕೊನೆಗೆ ವಿಧಿ ಇಲ್ಲದೆ ಮುಖರ್ಜಿಯವರಿಗೆ ಡಾಕ್ಟರ್‌ಜಿಯವರನ್ನು ಭೇಟಿಯಾಗಲು ಅವಕಾಶ ಮಾಡಿಕೊಟ್ಟರು.

    ವಿಷಯವನ್ನು ಕೇಳಿದ ಡಾಕ್ಟರ್‌ಜಿ, ಕೆಲವೇ ನಿಮಿಷಗಳಲ್ಲಿ ಮುಖರ್ಜಿಯವರಿಗೆ ಸಮಾಧಾನ ಹೇಳಿ ಒಪ್ಪಿಸಿ ಕಳಿಸಿದರು. ಗುರೂಜಿಯವರಿಗೆ ಆಶ್ಚರ್ಯವಾಯಿತು. ತಾವು ಹೇಳಿದ ಪರಿಹಾಕ್ಕೂ ಡಾಕ್ಟರ್‌ಜಿ ತಿಳಿಸಿದ ಸಮಾಧಾನಕ್ಕೂ ಯಾವುದೇ ವ್ಯತ್ಯಾಸವಿರಲಿಲ್ಲ. ಆದರೆ ಮುಖರ್ಜಿಯವರು ಡಾಕ್ಟರ್‌ಜಿಯವರು ಹೇಳಿದ ಮಾತ್ರಕ್ಕೆ ಒಪ್ಪಿಕೊಂಡಿದ್ದರು. ಡಾಕ್ಟರ್‌ಜಿಯವರಿಗೆ ಇನ್ನೊಬ್ಬರನ್ನು ಒಪ್ಪಿಸುವ ಸಾಮರ್ಥ್ಯವು ಹಾಗಿತ್ತು. ನಂತರದ ದಿನಗಳಲ್ಲಿ ಶ್ರೀ ಗುರೂಜಿಯವರು ಈ ಸಂದರ್ಭವನ್ನು ನೆನೆಸಿಕೊಂಡು, ಆ ಘಟನೆ ತಮಗಿದ್ದ ಅಹಂಕಾರವನ್ನು ಸುಟ್ಟುಹಾಕಿತು ಎನ್ನುತ್ತಾರೆ.

No comments:

Post a Comment