Thursday, 22 June 2017

ಶ್ರದ್ಧೆ



   ಸಮರ್ಥ ರಾಮದಾಸರ ಅನೇಕ ಶಿಷ್ಯರಲ್ಲಿ ಕಲ್ಯಾಣ ಎನ್ನುವವನೂ ಒಬ್ಬ. ಅವನೊಬ್ಬ ಶತ ಮೂರ್ಖ ಎಂಬ ಪ್ರತೀತಿಯಿತ್ತು. ಅವನ ಮೂರ್ಖತನ ಉಳಿದ ಎಲ್ಲಾ ಶಿಷ್ಯರಿಗೂ ತಮಾಷೆಯ ವಿಷಯವಾಗಿತ್ತು. ಯಾವುದೇ ಸಂದರ್ಭ ಸಿಕ್ಕರೂ ಕಲ್ಯಾಣನ ಮೂರ್ಖತನವನ್ನು ಎತ್ತಿ ಹಾಸ್ಯ ಮಾಡುವುದು ಆ ಶಿಷ್ಯರ ಸ್ವಭಾವವಾಗಿತ್ತು. ಆದರೆ ಕಲ್ಯಾಣನಿಗೆ ಸಮರ್ಥ ರಾಮದಾಸರ ಬಗ್ಗೆ ಅಪಾರವಾದ ಶ್ರದ್ಧೆ ಇತ್ತು.

    ಒಮ್ಮೆ ಬಾವಿಯ ಮೇಲೆ ಬೆಳೆದಿದ್ದ ಮರದ ಟೊಂಗೆಯನ್ನು ಕಡಿಯಲು ಇತರ ಶಿಷ್ಯರು ಕಲ್ಯಾಣನನ್ನು ಕಳಿಸುತ್ತಾರೆ. ಕಲ್ಯಾಣ ಮರದ ಟೊಂಗೆಯ ತುದಿಯ ಭಾಗದ ಕಡೆ ಕುಳಿತು ಟೊಂಗೆಯನ್ನು ಕಡಿಯಲು ತೊಡಗುತ್ತಾನೆ. ಕೊನೆಗೆ ಟೊಂಗೆಯ ತುಂಡು ಕಡಿದು, ಕಲ್ಯಾಣ ಬಾವಿಯಲ್ಲಿ ಬೀಳುತ್ತಾನೆ. ಉಳಿದ ಶಿಷ್ಯರು ಅವನ ಪಾಡನ್ನು ನೋಡಿ ಹೊಟ್ಟೆ ತುಂಬಾ ನಗುತ್ತಾರೆ. ರಾಮದಾಸರಿಗೆ ಈ ವಿಷಯ ತಿಳಿಯುತ್ತದೆ.

    ಒಮ್ಮೆ ಸಮರ್ಥ ರಾಮದಾಸರಿಗೆ ಗುಣವಾಗದ ಒಂದು ರೋಗ ತಗಲುತ್ತದೆ. ಅವರ ಕಾಲು ಬಾತುಕೊಂಡು ಕೀವು ಬರಲು ಪ್ರಾರಂಭವಾಗುತ್ತದೆ. ಅವರು ತಮ್ಮ ಶಿಷ್ಯರನ್ನು ಕರೆದು "ನನಗೆ ಒಂದು ಮೂಲಿಕೆ ದೊರೆತಿದೆ. ಅದನ್ನು ಗಾಯಕ್ಕೆ ಹಾಕಿದರೆ ಸಂಪೂರ್ಣ ಗುಣವಾಗುತ್ತದೆ. ಆದರೆ ಅದಕ್ಕೆ ಮುಂಚೆ ಗಾಯದಿಂದ ಕೀವನ್ನು ಸಂಪೂರ್ಣ ತೆರೆಯಬೇಕು. ಸ್ವಲ್ಪ ಕೀವು ಇದ್ದರೂ ಗುಣವಾಗದು. ನಿಮ್ಮಲ್ಲಿ ಯಾರಾದರೂ ನಿಮ್ಮ ಬಾಯಿಯಿಂದ ಕೀವು ತೆಗೆದರೆ ನಾನು ಮೂಲಿಕ ಹಚ್ಚಬಹುದು" ಎನ್ನುತ್ತಾರೆ.

    ಎಲ್ಲ ಶಿಷ್ಯರು ಕಾಲಿನ ಗಾಯದ ಕೀವು ತೆಗೆಯುವುದನ್ನು ನೆನೆಸಿಕೊಂಡು ಅಸಹ್ಯ ಪಟ್ಟುಕೊಂಡು ಮುಂದೆ ಬರದೆ ಹಿಂಜರಿಯುತ್ತಾರೆ. ಆದರೆ ರಾಮದಾಸರ ಮೂರ್ಖ ಶಿಷ್ಯನಾದ ಕಲ್ಯಾಣ ಒಂದಿನಿತೂ ಯೋಚಿಸದೆ ರಾಮದಾಸರ ಕಾಲನ್ನು ಬಾಯಿಯಿಂದ ಹೀರಲು ಪ್ರಾರಂಭಿಸುತ್ತಾನೆ. ಆಶ್ಚರ್ಯಕರವಾಗಿ ಆ ಕೀವು ಮಾವಿನ ಹಣ್ಣಿನ ರೂಪವಾಗಿ ಪರಿವರ್ತಿತವಾಗುತ್ತದೆ. ಸಮರ್ಥ ರಾಮದಾಸರು ಶಿಷ್ಯನ ಗುಣಗಾನ ಮಾಡುತ್ತಾರೆ.

    ಮುಂದೆ ರಾಮದಾಸರ ಅದೇ ಮೂರ್ಖ ಶಿಷ್ಯ ಬೆಳೆದು ದೊಡ್ಡ ತತ್ವಜ್ಞಾನಿಯಾಗುತ್ತಾನೆ. ಇಂದಿಗೂ ಸಜ್ಜನಗಡದಲ್ಲಿ ಸಮರ್ಥ ರಾಮದಾಸರ ಸಮಾಧಿಯ ಪಕ್ಕದಲ್ಲೇ ಕಲ್ಯಾಣನ ಸಮಾಧಿಯೂ ಕಾಣಸಿಗುತ್ತದೆ.

No comments:

Post a Comment